ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಭಯೋತ್ಪಾದಕನನ್ನು ಸಂಹರಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಘಟನೆಯಲ್ಲಿ ಹತನಾದವನನ್ನು ಅನಾಯತ್ ಅಶ್ರಫ್ ದಾರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಈತ ಸಕ್ರಿಯ ಭಯೋತ್ಪಾದಕನಾಗಿದ್ದ ಮತ್ತು ಉಗ್ರಗಾಮಿಗಳ ಓವರ್ ಗ್ರೌಂಡ್ ವರ್ಕರ್ (ಒಜಿಡಬ್ಲ್ಯೂ) ಆಗಿದ್ದ. ನಾಗರಿಕ ಜಿವರ್ ಹಮೀದ್ ಭಟ್ ಮೇಲೆ ಈತ ಗುಂಡು ಹಾರಿಸಿದ್ದ.
‘ಅನಾಯತ್ ತನ್ನ ಹಳ್ಳಿಯಲ್ಲಿ ಮತ್ತು ಸುತ್ತಮುತ್ತಲಿನ ಇತರ ಜನರನ್ನು ತನ್ನ ಅಕ್ರಮ ಶಸ್ತ್ರಾಸ್ತ್ರಗಳಿಂದ ಬೆದರಿಸುತ್ತಿದ್ದ. ಹಲವಾರು ಶಂಕಿತರ ಸಂಪೂರ್ಣ ವಿಚಾರಣೆ ಮತ್ತು ಮೂಲಗಳ ವರದಿಯ ನಂತರ, ಕೇಶ್ವಾ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಈ ವೇಳೆ ಈತ ಜಂಟಿ ಶೋಧ ತಂಡದ ಮೇಲೆ ಗುಂಡು ಹಾರಿಸಿದ’ ಎಂದು ಪೊಲೀಸರು ಹೇಳಿದ್ದಾರೆ.
‘ಈತನಿದ್ದ ಸ್ಥಳದ ಮೇಲೆ ದಾಳಿ ನಡೆಸುವಾಗ ಸುತ್ತಮುತ್ತಲಿನ ಮನೆಯಲ್ಲಿದ್ದ ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ. ಅವನಿಗೆ ಶರಣಾಗಲು ಅವಕಾಶ ನೀಡಲಾಗಿದೆ, ಆದರೆ ಅವನು ಅದಕ್ಕೆ ಕಿವಿಗೊಡಲಿಲ್ಲ. ನಂತರ, ಎನ್ಕೌಂಟರ್ನಲ್ಲಿ ಈತನನ್ನು ಸಂಹರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಆತನ ಬಳಿಯಿಂದ ಒಂದು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13