ಶಿರಸಿ: ಅಕ್ಷರದೀಪ ಫೌಂಡೇಶನ್, ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಹಾಗೂ ಧಾರವಾಡ ಯುವ ಬರಹಗಾರರ ಒಕ್ಕೂಟ ಇವರ ಸಹಯೋಗದಲ್ಲಿ ಧಾರವಾಡದ ರಂಗಾಯಣದಲ್ಲಿ ಆಯೋಜಿಸಿದ್ದ ವಾರ್ಷಿಕ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಯಶಸ್ವಿನಿ ಶ್ರೀಧರ ಮೂರ್ತಿಯವರಿಗೆ “ಶಿಕ್ಷಕ ಶ್ರೀ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟೂ ಹತ್ತು ಶಿಕ್ಷಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಶಸ್ವಿನಿಯವರು ಉದಯೋನ್ಮುಖ ಕವಯತ್ರಿ ಹಾಗೂ ಲೇಖಕಿ. ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇವರ ಕವನ ಹಾಗೂ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೇ 200 ಕ್ಕೂ ಹೆಚ್ಚು ರಾಜ್ಯಮಟ್ಟದ ಅಂತರ್ಜಾಲ ಆಧಾರಿತ ಸಾಹಿತ್ಯಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಗಣಿತ ರಂಗೋಲಿಗಳಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿರುವ ಇವರು ತಮ್ಮ ಬೋಧನೆಯಲ್ಲಿ ಗಣಿತ ರಂಗೋಲಿಗಳ ಕುರಿತು ಮಕ್ಕಳಿಗೆ ತರಬೇತಿಯನ್ನು ನೀಡುತ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಕ್ಷರದೀಪ ಫೌಂಡೇಶನ್ ರವರು ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನಕ್ಕೆ ಭಾಜನರಾಗಿದ್ದಾರೆ. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಮತ್ತು ಕಲಾ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ವಿದ್ಯಾರ್ಥಿಗಳಲ್ಲಿಯೂ ಕ್ರಿಯಾತ್ಮಕತೆಯನ್ನು ಬೆಳೆಸುತ್ತಿರುವ, ಸೃಜನಶೀಲರಾಗಿರುವ ಇವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. ಇವರ ಈ ಸಾಧನೆಗೆ ಶ್ರೀ ಕಾಳಿಕಾ ಭವಾನಿ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯೋಪಾಧ್ಯಾಯಿನಿ ಮೀನಾ ಬೋರಕರ ಹಾಗೂ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಇವರನ್ನು ಅಭಿನಂದಿಸಿದ್ದಾರೆ. ಬಂಧುಗಳು ಹಾಗೂ ಹಿತೈಷಿಗಳು ಶುಭ ಕೋರಿದ್ದಾರೆ.