ಶಿರಸಿ: ತಮ್ಮ ಏಕೈಕ ಪುತ್ರಿಯ ಮೂರನೇ ವರ್ಷದ ಜನ್ಮದಿನದ ಪ್ರಯುಕ್ತವಾಗಿ ಸಾವಿರಾರು ಅಭಿಮಾನಿಗಳ ಮನದಾಳದ ಸಲಹೆಯ ಮೇರೆಗೆ ಯೂಟ್ಯೂಬ್ ಲೈವ್ಕಾರ್ಯಕ್ರಮವಾಗಿ ಸಂಘಟಿಸಿದ್ದ ಹಿಮ್ಮೇಳ ವೈಭವ ಕಾರ್ಯಕ್ರಮ ಜನಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾದ ಹಿಲ್ಲೂರ್ ರಾಮಕೃಷ್ಣ ಹೆಗಡೆಯವರ ಹಾಗೂ ಅವರ ಪತ್ನಿ ರಮ್ಯಾ ರಾಮಕೃಷ್ಣ ದಂಪತಿ ತಮ್ಮ ಪುತ್ರಿ ಅದ್ವಿಕಾ ಹಿಲ್ಲೂರ್ಳ ಜನ್ಮ ದಿನದ ಪ್ರಯುಕ್ತ ಪ್ರತಿ ವರ್ಷ ವಿನೂತನವಾಗಿ ಒಂದಿಲ್ಲೊಂದು ಕಾರ್ಯಕ್ರಮದೊಂದಿಗೆ ಆಚರಿಸುತ್ತಾ ಅಭಿಮಾನಿಗಳಿಗೆ ಕಲಾ ರಸದೂಟ ನೀಡುತ್ತಿರುವುದು ಸಮಾಜಕ್ಕೊಂದು ಮಾದರಿ ಎನಿಸಿದೆ. ಪ್ರಸ್ತುತ ವರ್ಷ ಮಗಳ ಜನ್ಮ ದಿನದ ಅಂಗವಾಗಿ ಹಿಮ್ಮೇಳ ವೈಭವ ಎಂಬ ಲೈವ್ ಕಾರ್ಯಕ್ರಮ ಸಂಘಟಿಸಿ ಯಕ್ಷಾಭಿಮಾನಿಗಳ ಹೃದಯದಲ್ಲಿ ನೆಲೆಯೂರಿದ್ದಾರೆ.
ಯಕ್ಷಾಭಿಮಾನಿಗಳೇ ಕಳಿಸಿರುವ ವಿವಿಧ ಪ್ರಸಂಗದ ಹಾಡುಗಳನ್ನು ಚೀಟಿ ಎತ್ತುವ ಮೂಲಕ ಹಾಡಿ ಅರ್ಥಪೂರ್ಣವಾಗಿ ಮಗಳ ಜನ್ಮದಿನವನ್ನು ಆಚರಿಸಿದರು. ಹಿಮ್ಮೇಳ ವೈಭವದಲ್ಲಿ ಭಾಗವತರಾಗಿ ಸ್ವತಃ ಹಿಲ್ಲೂರ್ ರಾಮಕೃಷ್ಣ ಹೆಗಡೆಯವರೇ ಪಾಲ್ಗೊಂಡರೆ ಮದ್ದಲೆ ವಾದನದಲ್ಲಿ ಕಡತೋಕ ಸುನೀಲ್ ಭಂಡಾರಿ, ಹಾಗೂ ಚಂಡೆ ವಾದನದಲ್ಲಿ ಪ್ರಸನ್ನ ಹೆಗ್ಗಾರ್ ತಮ್ಮ ಕೈಚಳಕ ಪ್ರದರ್ಶಿಸಿ ಆಸ್ವಾದಿಸಿದವರ ಮನ ಗೆದ್ದಿದಾರೆ. ಸಾವಿರಾರು ಯಕ್ಷ ಅಭಿಮಾನಿಗಳು ಅದ್ವಿಕಾ ಹಿಲ್ಲೂರ್ಳಿಗೆ ಶುಭ ಆಶೀರ್ವದಿಸಿದರು.
ಯಶಸ್ವಿ ಕಾರ್ಯಕ್ರಮವನ್ನು ಗಿರಿಧರ ಕಬ್ನಳ್ಳಿ ಸ್ವಾಗತಿಸಿ ನಿರೂಪಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಯೂಟೂಬ್ ಲೈವ್ ನಲ್ಲಿ ಪ್ರಸರಿಸಲು ಶ್ರೀಪ್ರಭಾ ಸ್ಟುಡಿಯೋ ಸಹಕಾರ ನೀಡಿತು.