ಯಲ್ಲಾಪುರ: ಅಹಂಕಾರ ಹಾಗೂ ಅತೃಪ್ತಿಯನ್ನು ಅನುಭವಿಸುತ್ತಿರುವವರ ಮನಸ್ಥಿತಿ ಅಶಾಂತಿಯಿಂದ ಕೂಡಿರುತ್ತದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಶಾಂತಿಯನ್ನು ಪ್ರತಿಪಾದಿಸುತ್ತದೆ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯದ ಬಿ.ಕೆ ಶಿವಲೀಲಾ ಅವರು ಹೇಳಿದರು.
ಅವರು ಗುರುವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ “ವಿಶ್ವ ಶಾಂತಿ ದಿನಾಚರಣೆ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶಾಂತಿ ಎಂಬುದು ಎರಡು ಅಕ್ಷರದ ಪದವಾಗಿದ್ದರೂ ಅಪಾರವಾದ ಮೌಲ್ಯವನ್ನು ಹೊಂದಿದೆ. ಇತಿಹಾಸವನ್ನು ಗಮನಿಸಿದಾಗ ಅಹಂಕಾರ ಹಾಗೂ ಅತೃಪ್ತಿಯನ್ನು ಅನುಭವಿಸಿದವರು ಹೆಚ್ಚಿನ ಪ್ರಮಾಣದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ನಕಾರಾತ್ಮಕ ವಿಷಯಗಳಲ್ಲಿ ಜಯ ಗಳಿಸಿದವರಿಗೆ ಮಾತ್ರ ಶಾಂತಿ ಲಭಿಸುತ್ತದೆ. ಸಜ್ಜನರ ಒಡನಾಟ, ಸತ್ಸಂಗಗಳ ಮೂಲಕ ಮನಶಾಂತಿ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಅವರು ಮಾತನಾಡಿ, ಶಾಂತಿ ಎಂಬುದು ನಮ್ಮ ಅಂತರಂಗದಲ್ಲಿ ನೆಲೆಸುವ ಅತಿ ದೊಡ್ಡ ಸಂಪತ್ತಾಗಿದೆ. ಅಹಿಂಸೆ, ಅಹಂ ಗಳನ್ನು ನಿಯಂತ್ರಿಸುವ ನಿರಂತರ ಪ್ರಯತ್ನದಿಂದ ಶಾಂತಿ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು.
ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ವಿಶ್ವ ಶಾಂತಿ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಾದ ಪ್ರಾರ್ಥನಾ, ಪ್ರಥ್ವಿ, ಸಹನಾ ಮಾತನಾಡಿದರು. ಶಿಕ್ಷಕರಾದ ಗೀತಾ ಎಚ್.ವಿ, ಮಹೇಶ ನಾಯ್ಕ ಕಾರ್ಯಕ್ರಮದಲ್ಲಿದ್ದರು. ಪೃಷ್ಠಿ ದೇವಾಡಿಗ ಸಂಗಡಿಕರು ಪ್ರಾರ್ಥಿಸಿದರು. ಖೈರುನ್ ಶೇಖ್ ಸ್ವಾಗತಿಸಿದರು. ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ನೀತಾ ನಾಯ್ಕ ವಂದಿಸಿದರು.