ಕಾರವಾರ: ನಗರಕ್ಕೆ ಒಂದು ವಿದ್ಯುತ್ ಉಪಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ವಿದ್ಯುತ್ ವ್ಯತ್ಯಯವನ್ನು ತಪ್ಪಿಸಲು ಹೊಸದಾಗಿ ಉಪವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಮಾಡುವ ಕುರಿತು ಮನವಿ ಸಲ್ಲಿಸಿರುವುದಾಗಿ ಶಾಸಕಿ ರೂಪಾಲಿ ಎಸ್.ನಾಯ್ಕ ಮಾಹಿತಿ ನೀಡಿದ್ದಾರೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇಂಧನ ಸಚಿವ ವಿ.ಸುನೀಲ್ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರೊಂದಿಗೆ ಶಿರಸಿ ವೃತ್ತದ ವ್ಯಾಪ್ತಿಯಲ್ಲಿ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಹಾಗೂ 33ಕೆವಿ ರೆಫರನ್ಸ್ಗಳನ್ನು ಕಲ್ಪಿಸಿಕೊಡುವ ಕುರಿತು, ಶಕ್ತಿ ಪರಿವರ್ತಕಗಳನ್ನು ವೃದ್ಧಿಸುವ ಕಾಮಗಾರಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ನಗರ ಬೆಳೆಯುತ್ತಿರುವುದರಿಂದ ಜನಸಂಖ್ಯೆ ಹೆಚ್ಚುತ್ತಿದ್ದು, ಒಂದು ವಿದ್ಯುತ್ ಉಪಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ವಿದ್ಯುತ್ ವ್ಯತ್ಯಯವನ್ನು ತಪ್ಪಿಸಲು ಚೆಂಡಿಯಾದಲ್ಲಿ ಹೊಸದಾಗಿ ಉಪವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಅಲ್ಲದೇ, ಚಿತ್ತಾಕುಲದಲ್ಲಿ ಉಪ ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಜಾಗದ ಸಮಸ್ಯೆಯಾಗುತ್ತಿದ್ದು, ಅದನ್ನು ಪರಿಹರಿಸಿ ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳುವ ಕುರಿತು ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರ ಗಮನಕ್ಕೆ ತಂದು ಕೂಡಲೇ ಕಾಮಗಾರಿ ಪ್ರಾರಂಭಿಸುವoತೆ ಮನವಿ ಮಾಡಿದರು. ಅಲ್ಲದೇ, ಅಂಕೋಲಾ ತಾಲ್ಲೂಕಿನ ಮಾಸ್ತಿಕಟ್ಟೆ ಮತ್ತು ಬಳಲೆಯಲ್ಲಿ ಹೆಚ್ಚುವರಿ ವಿದ್ಯುತ್ ಶಾಖಾಧಿಕಾರಿ ಕಚೇರಿಯನ್ನು ಪ್ರಾರಂಭಿಸುವoತೆ ಮತ್ತು ಕಾರವಾರ ವಿಭಾಗದಲ್ಲಿ ಕಾರವಾರ ಮತ್ತು ಅಂಕೋಲಾ ತಾಲ್ಲೂಕುಗಳಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದೆ. ಇದನ್ನು ನೀಗಿಸಲು ಗ್ಯಾಂಗ್ಮನ್, ಲೈನ್ಮನ್ ಸೇರಿದಂತೆ ಸಿಬ್ಬಂದಿಗಳ ನಿಯೋಜನೆ ಮಾಡುವ ಕುರಿತು ಸಚಿವರಿಗೆ ಮನವರಿಕೆ ಮಾಡಿದರು. ಕದ್ರಾದ ಕೆಪಿಸಿ ನಿರಾಶ್ರಿತರಿಗೆ 70 ಕುಟುಂಬಗಳಿಗೆ ಶಾಶ್ವತ ಮನೆ ಇಲ್ಲದಿರುವ ಬಗ್ಗೆ ಸಚಿವರ ಗಮನಕ್ಕೆ ತಂದರು. ಈ ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮುಖ್ಯಮಂತ್ರಿಗಳೊoದಿಗೆ ಚರ್ಚಿಸಿ ಕೂಡಲೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕುಮಟಾ ಶಾಸಕರು, ಭಟ್ಕಳ ಶಾಸಕರು, ಹಳಿಯಾಳ ಶಾಸಕರು ಸೇರಿದಂತೆ ಇಂಧನ ಇಲಾಖೆ ವಿವಿಧ ಅಧಿಕಾರಿಗಳು ಇದ್ದರು.
ವಿದ್ಯುತ್ ಉಪಕೇಂದ್ರಕ್ಕಾಗಿ ಶಾಸಕಿ ರೂಪಾಲಿ ಮನವಿ
