ಬೆಂಗಳೂರು: ಸರ್ಕಾರದ ನಿಯಮಕ್ಕೆ ಒಳಪಟ್ಟ ರಾಜ್ಯದ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಸೋಮವಾರ ಮಸೂದೆ ಮಂಡನೆ ಮಾಡಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯರ ಜೊತೆ ಸಭೆ ನಡೆಸಿ, ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಸಂಬಂಧಿಸಿದಂತೆ ಮಸೂದೆ ಮಂಡನೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದರು. ಈ ಮಸೂದೆಯನ್ನು ನಿನ್ನೆಯಷ್ಟೇ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಉಭಯ ಸದನಗಳಲ್ಲಿಯೂ ಈ ಮಸೂದೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಬೇಕಿದೆ.
ಈ ಮಸೂದೆಯಲ್ಲಿ, ರಾಜ್ಯದಲ್ಲಿರುವ ಎಲ್ಲ ಧಾರ್ಮಿಕ ಕಟ್ಟಡಗಳನ್ನು ರಕ್ಷಣೆ ಮಾಡಲಾಗುತ್ತದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಈ ಮಸೂದೆಯಲ್ಲಿ ನಿರ್ಬಂಧ ಹೇರಲಾಗಿದೆ. ಸರ್ಕಾರದ ನಿಯಮಗಳಿಗೆ ಒಳಪಟ್ಟು ಇರುವ ಅನಧಿಕೃತ ನಿರ್ಮಾಣದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತಿಲ್ಲ. ಆದರೆ ಸರ್ಕಾರದ ನಿಯಮಗಳಿಗೊಳಪಡದ ಕಟ್ಟಡಗಳನೀ ತೆರವು ಮಾಡಬಹುದು ಎಂಬುದಾಗಿಯೂ ಇದರಲ್ಲಿ ತಿಳಿಸಲಾಗಿದೆ.
ಈ ವ್ಯಾಪ್ತಿಗೆ ದೇವಸ್ಥಾನಗಳು, ಚರ್ಚ್, ಮಸೀದಿ, ಗುರುದ್ವಾರ, ಬೌದ್ಧ ವಿಹಾರಗಳು ಸೇರಿದಂತೆ ಎಲ್ಲಾ ಧರ್ಮಗಳಿಗೆ ಸಂಬಂಧಿಸಿದಂತೆ ಇರುವ ಕಟ್ಟಡಗಳು ಬರುತ್ತದೆ. ಇವುಗಳು ಸಾರ್ವಜನಿಕ ಪ್ರದೇಶದಲ್ಲಿ ಸರ್ಕಾರದ ಅನುಮತಿ ಪಡೆಯದೆಯೇ ನಿರ್ಮಾಣವಾಗಿದ್ದರೂ ಸಹ ಅವುಗಳನ್ನು ಉಳಿಸಿಕೊಳ್ಳಲಾಗುವುದು ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.