ಮುಂಡಗೋಡ: ವಾರದ ಹಿಂದೆ ಮೃತಪಟ್ಟ ಬೌದ್ಧ ಬಿಕ್ಕು ಗುರುವಿನ ಮೃತದೇಹವನ್ನು ದೇಹದಿಂದ ಆತ್ಮ ಇನ್ನೂ ಹೋಗದೆ ದೇವರ ಧ್ಯಾನದಲ್ಲಿದೆ ಎಂದು ಬೌದ್ದ ಬಿಕ್ಕುಗಳು ವಾರಗಳ ಕಾಲ ಪೂಜೆ ಮಾಡಿದ ಘಟನೆ ತಾಲೂಕಿನ ಟಿಬೆಟಿಯನ್ ಕಾಲೋನಿಯಲ್ಲಿ ನಡೆದಿದೆ.
ಟಿಬೆಟಿಯನ್ ಕಾಲನಿಯ ಲೋಸಲಿಂಗ್ ಮೊನಾಸ್ಟಿಯ ಹಿರಿಯ ಬೌದ್ಧ ಸನ್ಯಾಸಿ ಲೊಬ್ಸಂಗ್ ಪುಂಟ್ಸೊಕ್(90) ಇದಕ್ಕೊಂದು ನಿದರ್ಶನವಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆಯೇ ಇವರು ಮನೆಯಲ್ಲಿ ಧ್ಯಾನ ಮಾಡುತ್ತಾ ಪ್ರಾಣ ತ್ಯಜಿಸಿದ್ದರು. ನಂತರ ಉಳಿದ ಬೌದ್ಧ ಸನ್ಯಾಸಿಗಳು ವಾರದಿಂದಲೂ ಇವರ ಮೃತದೇಹವನ್ನು ಹಾಗೆಯೇ ಇಟ್ಟು ಪೂಜಿಸುತ್ತಾ ಬಂದಿದ್ದಾರೆ. ಮೃತ ಗುರುಗಳ ಆತ್ಮ ಅವರ ದೇಹವನ್ನು ಬಿಟ್ಟು ಹೋಗಲಿಲ್ಲ ಎಂಬುದು ಇವರ ನಂಬಿಕೆಯಿoದ ಪ್ರತಿದಿನ ಪೂಜಿಸಲಾಗುತ್ತದೆ.
ಸಾಮಾನ್ಯವಾಗಿ ಮೃತದೇಹಗಳನ್ನು 1-2 ದಿನಗಳಲ್ಲಿ ಅಂತಿಮ ಸಂಸ್ಕಾರ ಮಾಡುತ್ತಾರೆ. ಕೆಲವು ಬೌದ್ಧ ಸನ್ಯಾಸಿಗಳ ಮೃತದೇಹಗಳನ್ನು ಒಂದು ವಾರ ಅಥವಾ 15-20 ದಿನಗಳವರೆಗೂ ಇಟ್ಟು ಪೂಜಿಸುವುದನ್ನು ಕಾಣಬಹುದು. ಇದು ನಾಲ್ಕು ವರ್ಷಗಳಲ್ಲಿ ಎರಡನೆ ಪ್ರಕರಣವಾಗಿದೆ.
ಟಿಬೆಟಿಯನ್ ಜನಾಂಗದಲ್ಲಿ ಯಾರು ಉನ್ನತ ಮಟ್ಟದ ಧಾರ್ಮಿಕ ಶಿಕ್ಷಣ ಪಡೆದಿರುತ್ತಾರೋ ಅಂಥವರ ಮರಣದ ನಂತರ ಅವರೊಳಗೆ ಮತ್ತೊಂದು ಆತ್ಮ ಬಂದು ಸೇರಿಕೊಂಡು 5, 10, 15, 20 ಹೀಗೆ ಕೆಲ ದಿನಗಳ ಕಾಲ ಇರುತ್ತದೆ. ಅದು ಮೃತ ದೇಹವನ್ನು ಬಿಟ್ಟು ಹೋಗುವ ವೇಳೆ ಮೃತ ದೇಹದ ಮೂಗಿನಲ್ಲಿ ರಕ್ತ ಸೋರುವಿಕೆ ಅಥವಾ ಮೃತಪಟ್ಟು ಕೆಲ ದಿನಗಳ ನಂತರ ತೆರೆದ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ನಂತರ ಅಂತಿಮ ಸಂಸ್ಕಾರ ಮಾಡಲಾಗುತ್ತದೆ. ಹಾಗೆಯೇ ಇವರು ಪುನರ್ಜನ್ಮ ತಾಳುತ್ತಾರೆ ಎಂದು ಪೂಜೆ ಮಾಡುತ್ತಾ ಬಂದಿದ್ದಾರೆ ಎಂದು ಹೇಳುತ್ತಾರೆ ಇಲ್ಲಿನ ಹಿರಿಯ ಬಿಕ್ಕುಗಳು.
ಕಾಲಕಾಲಕ್ಕೆ ಹಿರಿಯ ಬೌದ್ದ ಬಿಕ್ಕುಗಳು ಕೊಣೆಯಲ್ಲಿ ಮಂಚದ ಮೇಲೆ ಮಲಗಿರುವ ಸ್ಥಿಯಲ್ಲಿರುವ ಮೃತದೇಹವನ್ನು ಪರೀಕ್ಷಿಸುತ್ತಾ ದೀಪಗಳನ್ನು ಬೆಳಗುತ್ತಾ ಪ್ರಾಥಿಸುತ್ತಾ ಆತ್ಮ ಹೋಗಿದೆಯಾ ಇಲ್ಲವೋ ಪರೀಕ್ಷಿಸುತಾ ಇರುತ್ತಾರೆ ಎಂದು ಬೌದ್ಧ ಬಿಕ್ಕು ಖೆಸಾಂಗ ಹೇಳಿದರು.
ಟಿಬೆಟಿಯನ್ ಆಡಳಿತ ಕಚೇರಿ ಚೇರಮನ್ ಲಾಕ್ಪಾ ಸಿರಿಂಗ್ ಮಾತನಾಡಿ, ಲೊಬ್ಸಂಗ್ ಟಿಬೆಟ್ ಬಿಟ್ಟು ಭಾರತಕ್ಕೆ 1996ರಲ್ಲಿ ಬಂದಿದ್ದರು. ಅವರಿಗೆ ಯಾವುದೇ ರೋಗವಿರಲಿಲ್ಲ. ಪೂಜೆ ಮಾಡುವುದು, ಕಿರಿಯ ಬೌದ್ಧ ಸನ್ಯಾಸಿಗಳಿಗೆ ಧರ್ಮ ಬೋಧನೆ ಮಾಡುವುದಷ್ಟೇ ಅವರ ಕಾಯಕವಾಗಿತ್ತು. 7 ದಿವಸ ಅವರ ಮೃತದೇಹವನ್ನು ಯಾವುದೆ ಔಷಧೋಪಚಾರವಿಲ್ಲದೆ, ಮಂಜುಗಡ್ಡೆಯಲ್ಲಿ ಇರಿಸದೆ ಇಂದು ಅಂತ್ಯಕ್ರಿಯೆ ನಡೆಸಲಾಯಿತು. 20 ದಿನಗಳ ನಂತರ ಕೆಲವು ಸನ್ಯಾಸಿಗಳ ಅಂತ್ಯಕ್ರಿಯೆ ಮಾಡಿದ್ದು ಈ ಹಿಂದೆ ಗಾಂದೇನ್ ಮೊನಾಸ್ಟಿಯ ಸನ್ಯಾಸಿಯೊಬ್ಬರು 15 ದಿನಗಳ ಕಾಲ ಧ್ಯಾನ ಮಾಡುತ್ತಾ ಪ್ರಾಣ ತ್ಯಜಿಸಿದ್ದರು ಎಂದರು.