ಜಯಂತಿ ತೇ ಸುಕೃತಿನಃ ರಸಸಿದ್ಧಾಃ ಕವೀಶ್ವರಾಃ
ನಾಸ್ತಿ ಯೇಷಾಂ ಯಶಃಕಾಯೇ ಜರಾಮರಣಜಂ ಭಯಮ್ ||
ತಮ್ಮಲ್ಲಿನ ಲೋಕೋತ್ತರವಾದ ಕಾವ್ಯಶಕ್ತಿಯನ್ನು ಬಳಸಿ ಜನಾದರಣೀಯವಾದ ರಸಪೂತವಾದ ಕಾವ್ಯಗಳನ್ನು ನಿರ್ಮಿಸಿದ ಮಹಾಕವಿಗಳು ಸದಾ ಬದುಕಿರುತ್ತಾರೆ, ಸದಾ ನೆನಪಿರುತ್ತಾರೆ, ಸದಾ ಜಯಶಾಲಿಗಳಾಗಿರುತ್ತಾರೆ. ಅವರು ಇವತ್ತು ನಮ್ಮ ನಡುವೆ ಮಾನವಶರೀರವಾಗಿ ಬದುಕಿ ಇಲ್ಲದಿರಬಹುದು, ಆದರೆ ಅವರ ಕೀರ್ತಿಯೆಂಬ ಅಭೌತಿಕವಾದ ಶರೀರಕ್ಕೆ ಮುಪ್ಪು ಮತ್ತು ಮರಣಗಳೆಂಬ ಭಯವೇ ಇಲ್ಲ. ತಮ್ಮ ಯಶಸ್ಸಿನ ಮೂಲಕ ಇವತ್ತಿಗೂ ಅವರು ಬದುಕಿದ್ದಾರೆ. ಆರನೇ ಶತಮಾನದಲ್ಲಿ ಆಗಿಹೋದ ಕಾಳಿದಾಸ, ಎರಡೂಕಾಲು ಸಾವಿರ ವರ್ಷಗಳ ಹಿಂದೆ ಬದುಕಿದ್ದ ಚಾಣಕ್ಯ, ಪಾಣಿನಿ, (ಇವರು ಕಾವ್ಯಗಳನ್ನು ಒರೆದಿಲ್ಲದಿರಬಹುದು, ಆದರೆ ಮಹಾನ್ ಪ್ರಾಜ್ಞರು. ಸಂಸ್ಕೃತದಲ್ಲಿ ಕವಿ ಶಬ್ದಕ್ಕೆ ಪಂಡಿತ ಎಂತಲೂ ಅರ್ಥವಿದೆ) ಐದೂವರೆ ಸಾವಿರ ವರ್ಷಗಳ ಹಿಂದಿನ ವ್ಯಾಸರು, ಅವರಿಗಿಂತ ಹಿಂದಿನ ವಾಲ್ಮೀಕಿಗಳೆಲ್ಲ ಇವತ್ತಿಗೂ ತಮ್ಮ ಕಾವ್ಯದ ಯಶಸ್ಸಿನ ಮೂಲಕ ಬದುಕಿದ್ದಾರೆ.
ಶ್ರೀ ನವೀನ ಗಂಗೋತ್ರಿ