ಅಂಕೋಲಾ: ಭಾರತದಲ್ಲಿ ಆಹಾರಕ್ಕೆ ಮೊದಲು ಸ್ವಾವಲಂವನೆ ಇರಲಿಲ್ಲ. ಬೇರೆ ಕಡೆಗಳಿಂದ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಇಂದು ಭಾರತ ಆಹಾರದ ಸ್ವಾವಲಂಬನೆ ಕಂಡಿದೆ. 2021-22 ಕೃಷಿ ಬಜೆಟ್ 13,100 ಕೋಟಿಗೆ ಏರಿಕೆ ಕಂಡಿದ್ದು, ಕೊರೊನಾ ಸಮಯದಲ್ಲಿಯೂ ಕೂಡಾ 305 ಬಿಲಿಯನ್ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಆಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೈಗಡಿ ಗ್ರಾಮದಲ್ಲಿ ಆಯೋಜಿಸಿದ್ದ ‘ಅನ್ನದಂಗಳದಲ್ಲಿ ರೈತರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾರತ ಆಹಾರಧಾನ್ಯ ರಫ್ತಿನಲ್ಲಿ 9 ನೇ ಸ್ಥಾನದಲ್ಲಿದೆ. ಕೃಷಿ ಜಿಡಿಪಿ 20.22 ರಷ್ಟಿದೆ. ರೈತರು ಬೆಳೆದ ಆಹಾರೋತ್ನ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವುದೇ ನಮ್ಮ ಮುಂದಿರುವ ಸವಾಲು ಎಂದರು. ಚಿಕ್ಕ ರೈತರನ್ನ ಒಟ್ಟುಗೂಡಿಸುವ ಸಲವಾಗಿ ರೈತ ಉತ್ಪಾದಕ ಕಂಪೆನಿಗಳನ್ನು ಸ್ಥಾಪಿಸಬೇಕು ಎಂಬುದು ಮೋದೀಜಿಯವರ ಯೋಜನೆ. ರೈತರು ಯಾವ ಬೆಳೆಯನ್ನ ಬೆಳೆದು ಅದಕ್ಕೆ ಎಷ್ಟು ಪ್ರಮಾಣದ ರಾಸಾಯನಿಕವನ್ನ ಬಳಸಬೇಕೆಂದು ರೈತರಿಗೆ ತರಬೇತಿಯ ಅವಶ್ಯಕತೆ ಇದೆ. ಇಂಡಸ್ಟ್ರೀ ಡಿಪಾರ್ಟ ಮೆಂಟನವರು ರಫ್ತು ಮಾಡುವ ಸಂದರ್ಭದಲ್ಲಿ ಆಹಾರ ಧಾನ್ಯಗಳಿಗೂ ಹೆಚ್ಚಿನ ಗಮನಕೊಡಬೇಕು ಎಂದು ಹೇಳಿದರು
ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಕೇಂದ್ರ ಸಚಿವರು ನಿಸರ್ಗದ ಮಡಿಲಿನ ಕುಗ್ರಾಮವಾದ ಕೈಗಾಡಿ ಊರಿಗೆ ಬಂದಿರುವುದು, ಅದರಲ್ಲು ಬೋಟಿ ದಾಟಿ ಅವರು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು. ರೈತರ ಎಲ್ಲ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಬೆಳೆಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆಯನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗುವುದು, ನಮ್ಮ ಹಿರಿಯರು ಅಳವಡಿಸಿಕೊಂಡಿರುವ ಪದ್ಧತಿಯನ್ನು ಮರೆತ್ತಿದ್ದೇವೆ ರಾಸಾಯನಿಕ ಕೃಷಿ ಪದ್ದತಿಯನ್ನು ಅನುಸರಿದರಿಂದಾಗಿ ಇಂದಿನ ಜನಾಂಗವು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದೆ ಈ ಕಾರ್ಯಕ್ರಮದ ಮೂಲಕವಾಗಿ ಜಿಲ್ಲೆಯ ರೈತರು ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮಾತನಾಡಿ, ‘ಬುಡಕಟ್ಟು ಜನಾಂಗದವರು ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. 1970ರ ಸುಮಾರಿಗೆ ನಮ್ಮ ತಂದೆ ಏಳು ಎಕರೆ ಜಮೀನು ಹೊಂದಿದ್ದರು. ಈಗ ಅರಣ್ಯ ಕಾಯ್ದೆಯಿಂದಾಗಿ ಕೇವಲ ಐದು ಗುಂಟೆಯಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾವಯುವ ಕೃಷಿ ಮಿಷನ್ ಅಧ್ಯಕ್ಷ ಆನಂದಶ್ರೀ, ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್, ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಹಿರಿಯ ವಿನೋದ ಪ್ರಭು, ಶ್ರೀಕಾಂತ ಶೆಟ್ಟಿ, ಸಾವಯವ ಕೃಷಿ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಹೆಗಡೆ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಜಿಲ್ಲೆಯ ರೈತರು, ಕೃಷಿಕರು ಉಪಸ್ಥಿತರಿದ್ದರು.