ಕುಮಟಾ: ಮಹಿಳೆಯರಿಗೆ ಗೌರವ ನೀಡುವ ವ್ಯವಸ್ಥೆಯ ಭಾಗವಾಗಿ ಹಾಲುಣಿಸುವ ಕೊಠಡಿ ಅತ್ಯಂತ ಮಹತ್ವದ್ದಾಗಿದೆ. ಇಂತಹ ಹಾಲುಣಿಸುವ ಕೊಠಡಿಗಳು ಮಹಿಳೆಯರಿಗೆ ಅಗತ್ಯವಿರುವ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಕೆಯಾಗಬೇಕು ಎಂದು ಸಹಾಯಕ ಆಯುಕ್ತ ರಾಹುಲ್ ರತ್ನಂ ಪಾಂಡೆ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಸೆಲ್ಕೋ ಸೋಲಾರ್ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಸಜ್ಜುಗೊಳಿಸಲಾದ ರಾಜ್ಯದಲ್ಲೇ ಪ್ರಥಮ ಸೌರ ಶಕ್ತಿ ಆಧಾರಿತ ಮಕ್ಕಳ ಹಾಲುಣಿಸುವ ಕೊಠಡಿಯನ್ನು ಉದ್ಘಾಟಿಸಿ, ಮಾತನಾಡಿದರು.
ಇದೊಂದು ಚಿಕ್ಕ ಸರಳ, ವ್ಯವಸ್ಥೆಯಾದರೂ ಈ ಮೂಲಕ ಸಮಾಜಕ್ಕೆ ದೊರೆಯುವ ಸಂದೇಶ ದೊಡ್ಡದಿದೆ. ಹಾಲುಣಿಸುವ ಕೊಠಡಿಯನ್ನು ಮರುಬಳಕೆಯ ಇಂಧನವಾದ ಸೌರಶಕ್ತಿಯಿಂದ ಸಜ್ಜುಗೊಳಿಸಿದ ಪರಿಕಲ್ಪನೆ ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಅಧ್ಯಕ್ಷೆ ಡಾ. ನಮೃತಾ ಶಾನಭಾಗ ಮಾತನಾಡಿ, ಮಾತೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹಾಲುಣಿಸುವುಕ್ಕೆ ಉಂಟಾಗುವ ಮುಜುಗರ ತಪ್ಪಿಸುವುದಕ್ಕೆ ಉಪಯುಕ್ತವಾದ ವ್ಯವಸ್ಥೆ ಇದಾಗಿದೆ ಎಂದರು.
ಸೆಲ್ಕೋ ಸೋಲಾರದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕಿ ಸುರಭಿ ರಾಜಗೋಪಾಲ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಕೊರೊನಾ ಹಾಗೂ ಇತರ ಸವಾಲುಗಳನ್ನು ಎದುರಿಸಿ ಸಮಾಜದಲ್ಲಿ ಸೌರಶಕ್ತಿಯ ಮಹತ್ವ ಹಾಗೂ ವ್ಯಾಪಕತೆಯ ಅಗತ್ಯತೆಯನ್ನು ದಾಖಲಿಸುತ್ತಾ ಮುನ್ನಡೆಯುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸೌರಶಕ್ತಿ ಅಧಾರಿತ ಹಾಲುಣಿಸುವ ಕೊಠಡಿಯೊಂದು ಮಾದರಿ ಯೋಜನೆಯಾಗಿದೆ. ಇದೇ ರೀತಿ ಜನರ ಅಗತ್ಯತೆಗಳಿಗೆ ತಕ್ಕ ಸೌಲಭ್ಯಗಳ ಪೂರೈಕೆಗೆ ಸೆಲ್ಕೋ ಸದಾ ಚಿಂತನೆ ನಡೆಸುತ್ತಿರುತ್ತದೆ ಎಂದರು.
ಕೆ.ವಿ.ಜಿ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಶಿಲ್ಪಾ ಮಹಾಲೆ, ಸೆಲ್ಕೋದ ಡಿಜಿಎಂ ಗುರುಪ್ರಕಾಶ ಶೆಟ್ಟಿ, ರೋಟರಿ ಜಿಲ್ಲಾ ಗವರ್ನರ್ ನಾಗರಾಜ ಜೋಶಿ ಮಾತನಾಡಿದರು. ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ, ಸೆಲ್ಕೋದ ಶೇಖರ ಶೆಟ್ಟಿ, ರೋಟರಿ ಕಾರ್ಯದರ್ಶಿ ಶಿಲ್ಪಾ ಜಿನರಾಜ, ಎಂ.ಬಿ.ಪೈ, ಸುರೇಶ ಭಟ್, ಜಿ.ಎಸ್ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು