ಕುಮಟಾ: ತಾಲೂಕಿನ ಬಾಡ ಗ್ರಾಮದಲ್ಲಿ ಸರ್ಕಾರದಿಂದ ಎಮ್.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಬಾಡ ಹಾಗೂ ಹುಬ್ಬಣಗೇರಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಾಡ ಗ್ರಾಮದಲ್ಲಿ ಜನತಾ ವಿದ್ಯಾಲಯ ಮಾಧ್ಯಮಿಕ ಶಾಲೆ, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ, ರೈತರ ಸೇವಾ ಸಹಕಾರಿ ಸಂಘ, ಗ್ರಾಮ ಪಂಚಾಯತ್ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮತ್ತು ಪುರಾತನ ಮಾರಿಕಾಂಬ ದೇಗುಲವಿದೆ.
ಈ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಕಟ್ಟಡಗಳು ಉದ್ದೇಶಿತ ಎಮ್.ಎಸ.ಐ.ಎಲ್ ಮದ್ಯ ಮಾರಾಟ ಮಳಿಗೆಯಿಂದ 300 ಮೀಟರ್ ವ್ಯಾಪ್ತಿಯಲ್ಲಿ ಬರುತ್ತದೆ. ಜನತಾ ವಿದ್ಯಾಲಯ ಮಾಧ್ಯಮಿಕ ಶಾಲೆಗೆ ಹಾಗೂ ಉದ್ದೇಶಿತ ಮದ್ಯ ಮಾರಾಟ ಮಳಿಗೆಗೆ ಕೇವಲ 30 ಮೀಟರ್ ಅಂತರವಿದ್ದು ದಿನಕ್ಕೆ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಆಗಮಿಸುವ ಗ್ರಾಮದಲ್ಲಿ ಸರ್ಕಾರ ಮದ್ಯ ಮಾರಾಟ ಮಳಿಗೆಗೆ ಅನುಮತಿ ನೀಡಿದ್ದಲ್ಲಿ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಆರ್.ಜಿ ನಾಯ್ಕ ಸದಸ್ಯರಾದ ಮಂಜುನಾಥ ನಾಯ್ಕ, ಗಣೇಶ ನಾಯ್ಕ, ನಾಗೇಶ ನಾಯ್ಕ, ಸಚಿನ್ ನಾಯ್ಕ, ಗುರುನಂದನ ನಾಯ್ಕ, ವಿನಾಯಕ ನಾಯ್ಕ ಸೇರಿದಂತೆ ಅನೇಕರು ಇದ್ದರು