ಕುಮಟಾ: ಜಿಲ್ಲೆಯ ಜನರಿಗೆ ತುರ್ತು ಸಂಧರ್ಭದಲ್ಲಿ ಚಿಕಿತ್ಸೆ ನೀಡಲು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಕಾರಣ, ಪ್ರತೀ ಬಾರಿಯೂ ನೆರೆ ಜಿಲ್ಲೆಯಾದ ಉಡುಪಿ, ಹುಬ್ಬಳ್ಳಿ ಅಥವಾ ಗೋವಾ ರಾಜ್ಯವನ್ನು ಅವಲಂಬಿಸಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆ ಜಿಲ್ಲೆಯ ಜನರ ಬಹುದಿನದ ಕೂಗಾದ ” we need emergency hospital in uttara Kannada ” ಎಂಬ ವಿಷಯದ ಕುರಿತು ಶಾಸಕ ದಿನಕರ ಶೆಟ್ಟಿ ಮಳೆಗಾಲದ ಅಧಿವೇಶನದಲ್ಲಿ ಗುರುವಾರ ಗುಡುಗಿದ್ದಾರೆ.
ಸ.13 ಸೋಮವಾರದಿಂದ ಪ್ರಾರಂಭಗೊಂಡಿದ್ದ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕ ದಿನಕರ ಶೆಟ್ಟಿ, ಗುರುವಾರ ಮುಂಜಾನೆ ವರೆಗೆ ತಮ್ಮ ಸರದಿಗಾಗಿ ಕಾದು ನಂತರ ಮಾಡನಾಡಿ ತುರ್ತು ಆಸ್ಪತ್ರೆಯ ವಿಷಯವನ್ನು ಸರಕಾರದ ಎದುರು ಮಂಡಿಸಿದ್ದಾರೆ. ಈ ವೇಳೆ ನಮ್ಮ ಜಿಲ್ಲೆಯವರೇ ಆದ ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಈ ಸಭೆಯ ಮಟ್ಟಿಗೆ ನನ್ನ ಪ್ರಶ್ನೆ ತುಂಬಾ ಚಿಕ್ಕದು ಎಂದು ಎನಿಸಬಹುದು. ನಮ್ಮ ಜಿಲ್ಲೆಯಲ್ಲಿ ಯಾವುದೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಈವರೆಗೂ ಇಲ್ಲ.
ಈ ನಿಟ್ಟಿನಲ್ಲಿ ಜಿಲ್ಲೆಯ ಸಾರ್ವಜನಿಕರು ಸರಕಾರ ಹಾಗೂ ಜನಪ್ರತಿನಿಧಿಗಳ ಗಮನಸೆಳೆಯುವ ಅನೇಕ ಪ್ರಯತ್ನಗಳನ್ನು ಈಗಾಗಲೇ ಮಾಡಿದ್ದಾರೆ. ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಗೊಂದು ತುರ್ತು ಆಸ್ಪತ್ರೆ ಬೇಕೆಂದು ಅಭಿಯಾನವನ್ನೂ ಆರಂಭಿಸಿದ್ದರು. ಸಂಘಟನೆಗಳೂ ಕೂಡ ಹೋರಾಟ ನಡೆಸಿದ್ದವು. ಜಿಲ್ಲೆಯ ಯಾವುದೇ ಭಾಗದಲ್ಲಿ ರಸ್ತೆ ಅಪಘಾತ, ತುರ್ತು ಆರೋಗ್ಯ ಸಮಸ್ಯೆ ಮುಂತಾದವುಗಳ ಗುಣಮಟ್ಟದ ಚಿಕಿತ್ಸೆಗೆ ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಹಾಗೂ ಅಗತ್ಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಳ್ಳವಂತಾಗಿರುವುದು ಬೇಸರದ ಸಂಗತಿ. ಹೀಗಾಗಿ ಜಿಲ್ಲೆಗೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುವ ನಿಟ್ಟಿನಲ್ಲಿ ಸರಕಾರ ಕೂಡಲೇ ಸೂಕ್ತ ಕ್ರಮವಹಿಸಬೇಕು ಎಂದು ಸದನದ ಗಮನಸೆಳೆದರು.
ಮುಂದುವರೆದು ಮಾತನಾಡಿದ ಶಾಸಕರು” ತಾಲೂಕಿನಲ್ಲಿ ಒಟ್ಟೂ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದ ಬಹುತೇಕ ಕಡೆಗಳಲ್ಲಿ ಹೊರಗಿತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಲಾಗಿದ್ದು, ಒಬ್ಬರು ಒಂದಕ್ಕಿಂತ ಹೆಚ್ಚು ಕೇಂದ್ರಗಳಿಗೆ ತೆರಳಿ ಕೆಲಸ ನಿರ್ವಹಿಸುವುದು ಕಷ್ಟ ಸಾಧ್ಯ. ಅಲ್ಲದೇ ಸಿಬ್ಬಂಧಿಗಳ ಕೊರತೆಯೂ ಇರುವುದರಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ಶೀಘ್ರವಾಗಿ ನಡೆಯಬೇಕಿದೆ “ಎಂದು ಒತ್ತಾಯಿಸಿದರು.
ಶಾಸಕರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ,” ಈಗಾಗಲೇ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರಕಾರದಿಂದ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೆ ಶಂಕು ಸ್ಥಾಪನೆ ನಡೆಸಲಾಗುವುದು “ಎಂದರು