ಕಾರವಾರ: ‘ಸ್ವರ್ಣಿಮ್ ವಿಜಯ್ ವರ್ಷ’ದ ಅಂಗವಾಗಿ ಸೆ.17 ರಂದು ದೇಶದಾದ್ಯಂತ ಸಂಚರಿಸುತ್ತಿರುವ ವಿಜಯ ಜ್ಯೋತಿಯು ಸೆಪ್ಟೆಂಬರ್ 17ರಂದು ಕಾರವಾರಕ್ಕೆ ಆಗಮಿಸಲಿದೆ.
2020ರ ಡಿ.16ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿರುವ ಕಾರ್ಯಕ್ರಮಗಳು ಮುಂದುವರಿದಿದೆ. ಈ ವರ್ಷದ ಡಿಸೆಂಬರ್ 16ರಂದು ವಾರ್ಷಿಕೋತ್ಸವ ಸಮಾರಂಭವು ನವದೆಹಲಿಯಲ್ಲಿ ನಡೆಯಲಿದೆ. 1971ರ ಭಾರತ- ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸಾಧಿಸಿದ ವಿಜಯದ ಸಂಕೇತವಾಗಿ ಈ ಬಾರಿ 50ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲು, ವಿಜಯಕ್ಕೆ ಕಾರಣರಾದವರಿಗೆ ಗೌರವ ಸಲ್ಲಿಸಲು ಮತ್ತು ವಿಜಯದ ಆಚರಣೆಯ ಸಂಕೇತವಾಗಿ ಭಾರತೀಯ ರಕ್ಷಣಾ ಪಡೆಗಳಿಂದ ‘ಸ್ವರ್ಣಿಮ್ ವಿಜಯ್ ವರ್ಷ’ವೆಂದು ಆಚರಿಸಲಾಗುತ್ತಿದೆ.
ಒಂದು ವರ್ಷದ ಅವಧಿಯ ‘ಸ್ವರ್ಣಿಮ್ ವಿಜಯ್ ವರ್ಷ’ ಆಚರಣೆಯ ಕಾರ್ಯಕ್ರಮಗಳಿಗೆ ಡಿಸೆಂಬರ್ 16, 2020ರಂದು ಪ್ರಧಾನಿ ನರೇಂದ್ರ ಮೋದಿ ವಿಜಯ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದರು. ಈ ವಿಜಯದ ಜ್ಯೋತಿಯು ಭಾರತದ ಉದ್ದಗಲಕ್ಕೆ ಸಂಚರಿಸುತ್ತಿದ್ದು, ಡಿಸೆಂಬರ್ 15ರಂದು ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪಲಿದೆ. ಈ ಜ್ಯೋತಿ ಇದೀಗ ಕಾರವಾರ ಐಎನ್ಎಸ್ ಕದಂಬ ನೌಕಾನೆಲೆಗೆ ಬರಲಿದ್ದು, ಸೆಪ್ಟೆಂಬರ್ 24ರವರೆಗೆ ಇಲ್ಲಿಯೇ ಇರಲಿದೆ.
ಭಾರತೀಯ ಸೇನೆ ಮತ್ತು ನೌಕಾಪಡೆ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ‘ಆಪರೇಷನ್ ವಿಜಯ್’ ಸಮಯದಲ್ಲಿ ಸರ್ವೋಚ್ಚ ತ್ಯಾಗ ಮಾಡಿದವರ ಗೌರವಾರ್ಥವಾಗಿ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕದಲ್ಲಿ ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ವಿಜಯದ ಜ್ಯೋತಿಯನ್ನು ಬರಮಾಡಿಕೊಳ್ಳಲಿದ್ದಾರೆ.
ವಿಜಯ ಜ್ಯೋತಿಯು ಕಾರವಾರದಲ್ಲಿ ಸೆಪ್ಟೆಂಬರ್ 24ರವರೆಗೆ ಇರುವ ಸಮಯದಲ್ಲಿ ಯುದ್ಧವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ, ಶಾಲೆಗಳಲ್ಲಿ, ಕಾರವಾರದ ಎನ್ಸಿಸಿ ಘಟಕದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 24ರಂದು ವಿಜಯ ಜ್ಯೋತಿಯು ಬೆಳಗಾವಿಗೆ ಹೊರಡಲಿದೆ.