ಕುಮಟಾ: ಭರ್ತೃಹರಿಯ ನೀತಿಶತಕ ಚಿಕ್ಕದಾದ ಚೊಕ್ಕ ಗ್ರಂಥ. ಅದರ ಪಠನ, ಅರ್ಥಗ್ರಹಣ ಎಷ್ಟು ಮುಖ್ಯವೋ ಸಮಾಜಕ್ಕೆ ಭರ್ತೃಹರಿಯ ತಲಸ್ಪರ್ಶಿ ಪಾಂಡಿತ್ಯವನ್ನು ಪರಿಚಯಿಸುವ ಕೆಲಸವೂ ಅತಿಮುಖ್ಯ ಎಂದು ಶಿಕ್ಷಣತಜ್ಞ ಹಾಗು ಬಹುಮುಖ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಎಮ್ ಆರ್ ಅರುಣಕುಮಾರ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸಾಂತೂರು ಗ್ರಾಮದ ವರರುಚಿಸದನದಲ್ಲಿ ಜರುಗಿದ ನೀತಿಶತಕಾಭಿಯಾನದ ಸಮಾರೋಪದಲ್ಲಿ ಧ್ವನಿಮುದ್ರಿಕೆ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಡಾ. ಕೆ ಗಣಪತಿ ಭಟ್ಟರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀತಿಶತಕಕ್ಕೆ ಪದಚ್ಚೇದದೊಂದಿಗೆ ರಾಗಸಂಯೋಜನೆಯೆಂಬ ಮೆರಗು ನೀಡಿ, ನೂರು ದಿನಗಳ ಅಭಿಯಾನದ ಮೂಲಕ ಶಿಷ್ಯರಿಗೆ ಬೋಧಿಸಿ, ಫಲಿತಾಂಶ ಕಂಡುಕೊಂಡಿದ್ದಾರೆ ನೀತಿಶತಕದ ಸಮಗ್ರ ಮಾಹಿತಿಯನ್ನು ಕನ್ನಡ ಮತ್ತು ದೇವನಾಗರಿಯಲ್ಲಿ ಸಂಗ್ರಹಿಸಲಾಗಿದೆ. ಸಂಸ್ಕøತ ಸಂಗೀತಗಳ ಅಸಾಧಾರಣ ಸಂಗಮ ಇಲ್ಲಾಗಿದೆ. ಮೂರು ವರ್ಷಗಳಲ್ಲಿ ಮಾಡಬಹುದಾದ ಬೌದ್ಧಿಕ ಪ್ರಕ್ರಿಯೆಗಳನ್ನು ಕೇವಲ ನೂರು ದಿನಗಳಲ್ಲಿ ಪೂರೈಸಲಾಗಿದೆ. ತಾವೂ ಕಷ್ಟಪಟ್ಟು ಇನ್ನೊಬ್ಬರಿಗೂ ಕಾರ್ಯ ನೀಡಿ ಕಾಲಪರಿಮಿತಿಯಲ್ಲಿ ಕೈಗೊಂಡ ಕಾರ್ಯವನ್ನು ಪರಿಪೂರ್ಣಗೊಳಿಸುವ ಜಾಯಮಾನ ಡಾ. ಗಣಪತಿ ಭಟ್ಟರದ್ದು. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ವ್ಯಾಪ್ತಿಯಲ್ಲಿ ಈ ಅಭಿಯಾನ ನಡೆದು ಆಸಕ್ತರು ಇದರ ಲಾಭ ಪಡೆದುಕೊಳ್ಳುವಂತಾಗಲಿ ಎಂದು ಅರುಣಕುಮಾರ ಶುಭಹಾರೈಸಿದರು.
ಇನ್ನೋರ್ವ ಅತಿಥಿ ಹಾಗು ವ್ಯಾಖ್ಯಾನಕಾರ ಮಹಾಬಲ ಭಟ್ಟ, ಗೋವಾ ಮಾತನಾಡುತ್ತ, ಕಳೆದ ವರ್ಷ ಕರೋನಾ ಸಂದರ್ಭದಲ್ಲಿ ಅಂತರ್ಜಾಲದ ಮೂಲಕ ಗೋವಾದಿಂದ ನೀತಿಶತಕಾಭಿಯಾನ ನಡೆಸಲಾಗಿತ್ತು. ಆದರೆ ಇಷ್ಟೊಂದು ಆಯಾಮಗಳಿರಲಿಲ್ಲ. ಈಗ ಕತಗಾಲದ ಸತ್ಸಂಗಭವನದ ದ್ವಾರಾ ಜರುಗಿದ ಅಭಿಯಾನವು ಅನುಪಮವಾಗಿದೆ. ದೂರದರ್ಶಿತ್ವ, ಬಹುಮುಖ ಸಂವಹನ, ರಾಗಗಾಯನ, ಪದಚ್ಛೇದ, ವಿಮರ್ಶೆ ಮುಂತಾದವುಗಳಿಂದ ಇದು ಅಭೂತಪೂರ್ವವಾಗಿತ್ತು ಎಂದರು.
ಪ್ರಶಿಕ್ಷಕಿ ಪೂಜಾ ನಾಯಕ, ಬೆಳಗಾವಿ ಮಾತನಾಡಿ, ಮನುಷ್ಯನಿಗೆ ನೀತಿಯೇ ಮುಖ್ಯ. ಅದಿಲ್ಲದ ಬದುಕು ವ್ಯರ್ಥವೇ ಸರಿ, ನೀತಿಶತಕದ ದಶ ಪದ್ಧತಿಗಳು ಮಾನವೀಯ ಮೌಲ್ಯಗಳನ್ನು ಎತ್ತಿಡಿಯುವಂತಿದೆ. ನೀತಿಶತಕವೂ ಸ್ತೋತ್ರರತ್ನವಾಗಿದೆ ಎಂದರು.
ಶಿಬಿರಾರ್ಥಿ ಧಾರವಾಡದ ಗಿರಿಜಾ ಜೋಶಿ ಮಾತನಾಡಿ, ಹದಿನೈದು ವರ್ಷಗಳ ಹಿಂದೆ ಡಾ ಗಣಪತಿ ಭಟ್ಟರ ಮಾರ್ಗದರ್ಶನದಲ್ಲಿ ಧಾರವಾಡಲ್ಲಿ ದಿನನಿತ್ಯ ಪದಚ್ಛೇದ-ರಾಗದೊಂದಿಗೆ ಸ್ತೋತ್ರವರ್ಗ ನಡೆಯುತ್ತಿತ್ತು. ಎಲ್ಲ ಸ್ತೋತ್ರಗಳ ಪುಸ್ತಕ ಹಾಗು ಧ್ವನಿಮುದ್ರಣದ ಲಭ್ಯತೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಸಂಘಟನೆಯ ಮೂಲಮಂತ್ರವನ್ನೂ ಉಪದೇಶಿಸಿದ್ದಾರೆ. ಹತ್ತು ರಾಗಗಳಿಂದ ನೀತಿಶತಕಕ್ಕೆ ಮೆರಗುಬಂದಿದೆ ಎಂದರು.
ಕಲಾಶ್ರೀ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ, ನಿವೃತ್ತ ಶಿಕ್ಷಕ ಉಪ್ಪಿನಪಟ್ಟಣದ ಎಚ್ ಎನ್ ಅಂಬಿಗ ವಂದಿಸಿದರು. ಕಾರ್ಯಕ್ರಮ ಸಂಘಟಕ ಡಾ ಗಣಪತಿ ಭಟ್ಟ ಪರಿಚಯಿಸಿದರು. ಯಾದವೇಶ ಶರ್ಮಾ ಘನಪಾಠಿ ಸ್ವಾಗತಿಸಿದರು. ಕು ನಾಗಶ್ರಿಯಾ, ಸುಮಮಗಲಾ ಭಟ್ಟ, ಬಾಗೇಶ್ರೀ-ದುರ್ಗಾ ರಾಗದಲ್ಲಿ ನೀತಿಶತಕದ ಶ್ಲೋಕಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ರಾಮ ಗೋಪಾಲ ಭಟ್ಟ ಮತ್ತು ಕೃಷ್ಣ ಭಟ್ಟರಿಗೆ ಪ್ರಪೌತ್ರ ರಾಧೇಶ್ಯಾಮನ ಜನನ ನಿಮಿತ್ತ ಕನಕಾಭಿಷೇಕ ನೆರವೇರಿಸಲಾಯಿತು. ದತ್ತಾತ್ರೇಯ ಘನಪಾಠಿ, ಶಿವಂಕರ ಪಾಠಕ, ಹರಿಶ್ಚಂದ್ರ ಭಟ್ಟ, ಭಾಲಚಂದ್ರ ಗುಣಿ, ರಮೇಶ ವರ್ಧನ, ಡಾ ಗೋಪಾಲಕೃಷ್ಣ ಹೆಗಡೆ, ಜಯಲಕ್ಷ್ಮಿ ವೆಂಕಟೇಶ, ನಾರಾಯಣ ಜೋಯಿಸ, ಭಾರತಿ ಗೌಡ, ಶಿವರಾಮ ಭಂಡಿವಾಳ, ರವಿ ಅಶೋಕ ಭಟ್ಟ, ಹರಿಹರ ಹೆಗಡೆ, ರಾಘವ ಭಟ್ಟ, ಮೃತ್ಯುಂಜಯ ಮುಂತಾದವರು ಉಪಸ್ಥಿತರಿದ್ದರು