ಶಿರಸಿ: ಶಿರಸಿ ಮತ್ತು ಸುತ್ತಲಿನ ತಾಲೂಕುಗಳಲ್ಲಿ ಕೊರೋನಾ ರೋಗವು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವನ್ನು ಜು.13 ರಿಂದ ಅನಿರ್ದಿಷ್ಟಾವಧಿಯವರೆಗೆ ಸ್ವಯಂಗೋಷಿತ ಲಾಕ್ಡೌನ್ ಮಾಡಲಾಗಿದೆ ಎಂದು ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಿಳಿಸಿದ್ದಾರೆ.
ಅವರು ಶ್ರೀಮಠದಲ್ಲಿ ಶಿಷ್ಯ-ಭಕ್ತರಿಗೆ ಸಂದೇಶ ನೀಡುತ್ತ ಈ ವಿಷಯ ತಿಳಿಸಿದರು. ಅನೇಕ ಮಠ ದೇವಸ್ಥಾನಗಳು ಬಹಳ ಹಿಂದೆಯೇ ತಾವಾಗಿಯೇ ಲಾಕ್ಡೌನ್ ನಿಯಮಗಳನ್ನು ಅನುಸರಿಸಿವೆಯಾದರೂ ಶ್ರೀಮಠದಲ್ಲಿ ಹಲವು ನಿಯಮಗಳನ್ನು ಅನುಸರಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶ್ರೀಮಠದ ಶಿಷ್ಯರಿಂದ ಪಾದಪೂಜೆ, ಭಿಕ್ಷಾ ಸೇವೆಗಳನ್ನು ಹಾಗೂ ಮೊದಲೇ ಪೋನ್ ಮೂಲಕ ಅನುಮತಿ ಪಡೆದು ಬಂದವರಿಗೆ ದಿನಕ್ಕೆ 10 ಜನರ ಮಿತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಸ್ವಯಂಘೋಷಿತವಾಗಿ ಅನಿರ್ದಿಷ್ಠಾವಧಿ ಲಾಕ್ಡೌನ್ ನಿಯಮಗಳನ್ನು ಅನುಸರಿಸಲಾಗುವುದು. ಶ್ರೀ ಶ್ರೀಗಳವರ ಅನುಷ್ಠಾನದ ಹೊರತಾಗಿ ಚಾತುರ್ಮಾಸ್ಯದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಕಾರಣ ಸದ್ಭಕ್ತರೆಲ್ಲರೂ ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿದ್ದು ಶ್ರೀ ದೇವರನ್ನು ಭಜಿಸಿ ರೋಗದ ವಿರುದ್ಧ ಜಯಿಸಬೇಕು ಎಂದು ತಿಳಿಸಿದರು.
ಸಮಾಜದ ಎಲ್ಲ ಜನರೂ ತಮ್ಮ ತಮ್ಮ ಮನೆಗೆ ತಾವೇ ಲಾಕ್ ಡೌನ್ ಮಾಡಿಕೊಳ್ಳಬೇಕು. ಅನಗತ್ಯವಾದ ಪ್ರಯಾಣಗಳನ್ನು ಬಿಡಬೇಕು. ಮದುವೆ ಮುಂತಾದ ಸಮಾರಂಭಗಳನ್ನು ಮುಂದೂಡಬೇಕು. ಕೊರೋನಾ ವೈರಸ್ ಹರಡುವಿಕೆ ನಿರ್ಣಾಯಕ ಹಂತಕ್ಕೆ ತಲುಪಿದ್ದು ಈಗ ಎಚ್ಚರಿಕೆ ತಪ್ಪಿದರೆ ಮುಂದೆ ತುಂಬಾ ಗಂಭೀರ ಪರಿಸ್ಥಿತಿ ಎದುರಿಸುವ ಅಪಾಯವಿದೆ. ಆದ್ದರಿಂದ ಸ್ವಲ್ಪವೂ ಮುಲಾಜಿಲ್ಲದೆ, ನಿರ್ಲಕ್ಷಿಸದೆ ಎಲ್ಲರೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.
ಅಲ್ಲದೆ ಹಿಂದೆ ಅನೇಕ ಜಪ-ಸ್ತೋತ್ರ-ಹೋಮಗಳನ್ನು ನಡೆಸಲು ತಿಳಿಸಲಾಗಿತ್ತು. ಅವುಗಳನ್ನು ಈಗ ಮತ್ತೆ ಮಾಡುವ ಅವಶ್ಯಕತೆಯಿದೆ. ಸಾಧ್ಯವಾಗುವಷ್ಟು ಜಪ, ಹೋಮ, ಸ್ತೋತ್ರಗಳನ್ನು ತಮ್ಮ ತಮ್ಮ ಮನೆಯಲ್ಲಿ ಈಗ ಮಾಡಬೇಕೆಂದು ನಮ್ಮ ಕಳಕಳಿ. ಸರಕಾರವು ಹಿಂದೆ ತಿಳಿಸಿದ ನಿಯಮಗಳನ್ನು ಪಾಲನೆ ಮಾಡುತ್ತ ದೇವರ ಅನುಗ್ರಹವನ್ನು ಪಡೆಯುತ್ತಾ ಹೋದರೆ ಮಾತ್ರವೇ ಈ ಗಂಭೀರ ಅಪಾಯದಿಂದ ನಾವೆಲ್ಲರೂ ಪಾರಾಗಲು ಸಾಧ್ಯ ಎಂದರು.
ಕೊರೋನಾ ವೈರಾಣುವಿನ ಗಂಭೀರತೆ ಪರಿಗಣಿಸಿ, ಶ್ರೀಮಠದ ಮತ್ತು ಶಿಷ್ಯ-ಭಕ್ತರ ಹಿತದೃಷ್ಟಿಯಿಂದ ಅನಿರ್ದಿಷ್ಠಾವಧಿವರೆಗೆ ಶ್ರೀಮಠಕ್ಕೆ ಯಾರಿಗೂ ಪ್ರವೇಶವಿರುವುದಿಲ್ಲವೆಂದು ತಿಳಿಸಲು ವಿಷಾದಿಸುತ್ತೇವೆ. ಅನಿವಾರ್ಯವಾದ ಈ ಕಡ್ಡಾಯ ನಿಯಮಕ್ಕೆ ಸಮಸ್ತ ಶಿಷ್ಯ-ಭಕ್ತರೆಲ್ಲರೂ ಸಹಕರಿಸಬೇಕೆಂದು ಶ್ರೀಮಠದ ಆಡಳಿತಮಂಡಳಿಯ ಪರವಾಗಿ ವ್ಯವಸ್ಥಾಪಕರು ಎಸ್. ಎನ್. ಗಾಂವ್ಕರ ಬೆಳ್ಳಿಪಾಲ ವಿನಂತಿಸಿದ್ದಾರೆ.