ಜೋಯಿಡಾ: ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಮತ್ತು ಸಾಗುವಳಿದಾರರಿಗೆ ಭೂಗಳ್ಳರು ಎಂದು ಆಪಾದಿಸಿ ಭೂ ಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ಜೋಯಿಡಾದ ನಾಲ್ಕು ಕುಟುಂಬಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸಮನ್ಸ ಬಂದಿರುವದು ಜಿಲ್ಲೆಯ ಅರಣ್ಯವಾಸಿಗಳಿಗೆ ಆತಂಕಕ್ಕೆ ಕಾರಣವಾಗಿದೆ.
ಜೋಯಿಡಾ ತಾಲೂಕಿನ ಮಹಾದೇವ ಸಖಾರಾಮ ಭಾಗವತ, ಶಿವರಾಮ ಸಖಾರಾಮ, ಶಂಕರ ಸಖಾರಾಮ ಭಾಗವತ, ಕೃಷ್ಣ ಸಖಾರಾಮ ಭಾಗವತ ಇವರುಗಳಿಗೆ ಆರೋಪಿತರೆಂದು ಸಂಭೋದಿಸಿ ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲೂಕು, ಮುಂಬರಣಿ ಹೋಬಳಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ವನ್ಯ ಜೀವಿ ವಲಯದ ಗುಂದ ವ್ಯಾಪ್ತಿಯ ಮರಡಾದ ಚಾಪೇರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಅರಣ್ಯ ಪ್ರದೇಶವನ್ನು ಕಬಳಿಸಿ ತೋಟ ಮಾಡಿರುವ ಬಗ್ಗೆ ಆರೋಪಿಸಿ ವಿಚಾರಣೆಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಸಮನ್ಸ ಬಂದಿರುವದು ಜಿಲ್ಲೆಯ ಅರಣ್ಯ ಅತಿಕ್ರಮಣದಾರರಿಗೆ ಚಿಂತೆಗೆ ಕಾರಣವಾಗಿದೆ.
ವಿಚಾರಣೆ ಸ್ಥಗಿತಕ್ಕೆ ಆಗ್ರಹ:
ರಾಜ್ಯ ಸರಕಾರವು ಭೂ ಕಬಳಿಕೆ ನಿಷೇದ ಕಾಯಿದೆ ಅಡಿಯಲ್ಲಿ ಭೂ ಕಳ್ಳರು ಎಂದು ಅಪಾದಿಸಿ ಪ್ರಕರಣ ದಾಖಲಿಸುವ ಕೈ ಬಿಟ್ಟು ವಾಸ್ತವ್ಯ ಮತ್ತು ಸಾಗುವಳಿಗಾಗಿ ಮಾಡಿಕೊಂಡಂತಹ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಅವಕಾಶ ನೀಡಬೇಕು ಮತ್ತು ವಿಶೇಷ ನ್ಯಾಯಾಲಯ ಬೆಂಗಳೂರಿನಲ್ಲಿ ಜರಗುವ ಸದ್ರಿ ಪ್ರಕರಣಗಳ ವಿಚಾರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
3 ವರ್ಷ ಜೈಲ್ ಶಿಕ್ಷೆ:
ಅರಣ್ಯವಾಸಿಗಳಿಗೆ ಅನಧೀಕೃತವಾಗಿ, ಕೇಂದ್ರ ಸರಕಾರದ ಪರವಾನಿಗೆ ಇಲ್ಲದೇ ಅರಣ್ಯ ಭೂಮಿಯನ್ನ ಸಾಗುವಳಿ ಮಾಡಿದ್ದಲ್ಲಿ ರಾಜ್ಯದಲ್ಲಿ ಭೂ ಕಬಳಿಕೆ ನಿಷೇದ ಕಾಯಿದೆ ಜಾರಿಗೆ ಬಂದಿದ್ದು ಇರುತ್ತದೆ. ಅನಧೀಕೃತ ಸಾಗುವಳಿ ಮಾಡಿರುವ ಅರಣ್ಯವಾಸಿಗಳು ಬೆಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕು, ಇಲ್ಲದಿದ್ದಲ್ಲಿ ಕಾನೂನು ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ. ಸದ್ರಿ ಕಾಯಿದೆ ಅಡಿಯಲ್ಲಿ ಅನಧೀಕೃತ ಅತಿಕ್ರಮಣದಾರರಂತ ಪುರಾವೆ ಆದಲ್ಲಿ ಅತಿಕ್ರಮಣದಾರರಿಗೆ 3 ವರ್ಷ ಜೈಲು ಶಿಕ್ಷೆ, 25,000 ದಂಡ ವಿಧಿಸಲು ಸದ್ರಿ ಕಾನೂನಿನಲ್ಲಿ ಅವಕಾಶವಿರುವುದು ಜಿಲ್ಲೆಯ ಅತಿಕ್ರಮಣದಾರರಿಗೆ ಆತಂಕಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ