ಶಿರಸಿ: ಮಂಗಳೂರಿನ ದೇರಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಅಧೀನದ ಜಸ್ಟೀಸ್ ಕೆ.ಎಸ್.ಹೆಗಡೆ ಚಾರಿಟೇಬಲ್ ಆಸ್ಪತ್ರೆ ಆರಂಭಿಸಿದ ಕ್ಷೇಮಾ ವಿಮಾ ಯೋಜನೆಗೆ ಫಲಾನುಭವಿ ಪಡೆದ ವಿಮೆ ಜತೆಗೆ ಸ್ವತಃ ಆಸ್ಪತ್ರೆಯ ಸಾಮಾಜಿಕ ಬದ್ದತಾ ನಿಧಿಯಿಂದ 350 ರೂಪಾಯಿಗಳ ತಮ್ಮ ಪಾಲು ಪ್ರಕಟಿಸಿದ್ದೇವೆ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ ಶೆಟ್ಟಿ ತಿಳಿಸಿದರು.
ಮಂಗಳವಾರ ಅವರು ತಾಲೂಕಿನ ದೊಡ್ನಳ್ಳಿಯ ನರೇಬೈಲ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಹಾಗೂ ಕದಂಬ ಚಾರಿಟೇಬಲ್ ಫೌಂಡೇಶನ್ ಹಮ್ಮಿಕೊಂಡ ಕ್ಷೇಮ ಹೆಲ್ತ್ ಕಾರ್ಡ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಹದಿನಾಲ್ಕು ವರ್ಷದಿಂದ ಕ್ಷೇಮ ಹೆಲ್ತ ಕಾರ್ಡ ಇದ್ದರೂ ಅದನ್ನು ಈ ಬಾರಿ ಇನ್ನಷ್ಟು ವಿಸ್ತಾರಗೊಳಿಸಲಾಗಿದೆ. ಈವರೆಗೆ ಸುಮಾರು 18 ಸಾವಿರ ಕುಟುಂಬಗಳು ವಿಮಾ ವ್ಯಾಪ್ತಿಯಲ್ಲಿ ಇದ್ದರು. ಈ ಬಾರಿ ಈ ಹೆಲ್ತ ಕಾರ್ಡ ಇನ್ನೂ ವಿಸ್ತಾರ ಮಾಡಲಾಗಿದ್ದು ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಕನಿಷ್ಠ ಒಂದು ಲಕ್ಷಕ್ಕೂ ಮಿಕ್ಕಿ ಕುಟುಂಬ ತಲುಪುವ ಗುರಿ ಹೊಂದಿದ್ದೇವೆ. ಕುಟುಂಬದ ಯಜಮಾನ ಆಕಸ್ಮಿಕ ಮೃತರಾದರೆ ಪೊಲೀಸ್ ಎಪ್ಐಆರ್ ಇದ್ದರೆ 25 ಸಾವಿರದಿಂದ 50 ಸಾವಿರ ರೂ. ತನಕ ವಿಮೆ ಕೂಡ ನೀಡಲಾಗುತ್ತದೆ. 200 ರೂ ನೀಡಿ ವಯಕ್ತಿಕ ವಿಮೆ ಪಡೆದರೂ 350 ರೂ ಆಸ್ಪತ್ರೆ ಸಾಮಾಜಿಕ ಜವಬ್ದಾರಿ ನಿಧಿಯಿಂದ ಭರಣ ಮಾಡುತ್ತೇವೆ ಎಂದರು.
70 ವರ್ಷದೊಳಗಿನ ಹಿರಿಯರು ಸಹಿತ ವಿಮೆ ವ್ಯಾಪ್ತಿಗೆ ಸಿಗಬೇಕಾದರೆ ಕುಟುಂಬದ ಏಳು ಮಂದಿಗೆ 1050 ರೂ. ಪಾವತಿಸಬೇಕು. ಕ್ಯಾನ್ಸರ್ನಿಂದ ಹಿಡಿದು ಹೃದ್ರೋಗ, ನರರೋಗ, ಮಂಡಿ ಸಮಸ್ಯೆ ತನಕ ಇದು ಹೆಲ್ತ ಕಾರ್ಡ ನೆರವಾಗಲಿದೆ ಎಂದರು. 200 ರೂ ಪಾವತಿಸಿದರೆ 30 ಸಾ.ರೂ, 400 ರೂ ಪಾವತಿಸಿದರೆ 50 ಸಾ.ರೂ. ನೆರವು ಸಿಗಲಿದೆ. ಐದು ಜನರ ಕುಟುಂಬಕ್ಕೆ 300, 700 ರೂ. 30 ಸಾ.ರೂ, 50 ಸಾ.ರೂ ನೆರವು ಸಿಗಲಿದೆ. ಆಧಾರ ಕಾರ್ಡ, ರೇಶನ್ ಕಾರ್ಡ ಪ್ರತಿ ನೀಡಬೇಕು ಎಂದರು. ಇದರ ಜೊತೆಗೆ ಹೊರ ರೋಗಿಗಳ ವಿಭಾಗದಲ್ಲೂ ಆಸ್ಪತ್ರೆ ಸ್ವಂತ ನಿಧಿಯಿಂದ ಶೇ.20ರಷ್ಟು ವಿನಾಯತಿ ಹೆಲ್ತ ಕಾರ್ಡ ಪಡೆದವರಿಗೆ ನೀಡಲಾಗುತ್ತದೆ ಎಂದರು.
ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ, ವಿಮಾ ಮಾಹಿತಿ ಬೇಕಾಗಿದೆ. ಜಿಲ್ಲೆಯ ಎಲ್ಲ ಸೊಸೈಟಿಗಳ ವ್ಯಾಪ್ತಿಯಲ್ಲಿ ಇದನ್ನು ಅಳವಡಿಸಲು ಯೋಜಿಸಬೇಕು. ಅದಕ್ಕೆ ಸಹಕಾರ ನೀಡಲು ನಾವು ಸಿದ್ದ ಎಂದರು.
ಸ್ಥಳೀಯ ಶಂಭುಲಿಂಗೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಶ್ರೀಪಾದ ಹೆಗಡೆ ದೊಡ್ನಳ್ಳಿ ಮಾತನಾಡಿ, ದೇರಳಕಟ್ಟೆ ಆಸ್ಪತ್ರೆ ಸೇವೆ ಜಿಲ್ಲೆಯ ಜನರಿಗೆ ಲಭಿಸಿದೆ ಎಂದರು.
ಸಾಮಾಜಿಕ ಪ್ರಮುಖ ಎಸ್.ಎನ್.ಹೆಗಡೆ ದೊಡ್ನಳ್ಳಿ, ಶಿರಸಿಯಲ್ಲೂ ನಿಟ್ಟೆ ಆಸ್ಪತ್ರೆ ಶಾಖೆ ತೆರೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಕೆ.ವಿ.ಹೆಗಡೆ ದೊಡ್ನಳ್ಳಿ ಮಾತನಾಡಿದರು.
ಈ ವೇಳೆ ನಿಟ್ಟೆ ಮಾರುಕಟ್ಡೆ ವಿಭಾಗದ ಜಯಸನ್ ಜಾರ್ಜ, ಸಹಾಯಕ ಅಧಿಕಾರಿ ಅಕ್ಷಯ,ಸೊಸೈಟಿ ಉಪಾಧ್ಯಕ್ಷ ಇಬ್ರಾಹೀಂ ನಬೀಸಾಬ್ ಆರೆಕೊಪ್ಪ, ಮುಖ್ಯಸ್ಥ ಕಾರ್ಯನಿರ್ವಾಹಕ ಎಸ್.ಎಂ.ಹೆಗಡೆ ಬೊಪ್ಪನಳ್ಳಿ, ಕದಂಬದ ಸೌಮ್ಯ ಭಟ್ಟ ಇತರರು ಇದ್ದರು.
ಸಹಕಾರಿ ಸಂಘಗಳ ಮೂಲಕ ಬಡವರನ್ನು, ಗ್ರಾಮೀಣ ಜನರನ್ನು ತಲುಪುವ ಕಾರ್ಯ ಆಗಬೇಕಿದೆ. ಯಾರಿಗೆ ಯಾವಾಗ ತೊಂದರೆ ಆಗುತ್ತದೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಕೆಡಿಸಿಸಿ ಬ್ಯಾಂಕ್ ಸಹಕಾರಕ್ಕೆ ಸಿದ್ದ. – ಮೋಹನದಾಸ್ ನಾಯಕ, ಉಪಾಧ್ಯಕ್ಷ, ಕೆಡಿಸಿಸಿ ಬ್ಯಾಂಕ್