ಶಿರಸಿ: ಹಿಂದು ಸಂಸ್ಕೃತಿ ಸಂಸ್ಕಾರಗಳು ತಳಮಟ್ಟದಲ್ಲಿ ಬಲಗೊಳ್ಳಬೇಕು. ಮೊದಲು ನಾವು ಆಚರಿಸಿ ನಂತರ ಕಿರಿಯರಿಗೆ ಕಲಿಸಿಕೊಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ತಾಲೂಕಿನ ದೇವತೇಮನೆ ಶ್ರೀ ಲಲಿತಾ ಭದ್ರಕಾಳಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ತಿನ ಸಾಪ್ತಾಹಿಕ ಸತ್ಸಂಗಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಆಚಾರ, ವಿಚಾರ, ನಡೆ- ನುಡಿ ಹಾಗೂ ಜೀವನ ಆದರ್ಶಗಳನ್ನು ಮನೆ ಮನೆಗಳಲ್ಲಿ ಗಟ್ಟಿಗೊಳಿಸುವದು ಅಗತ್ಯವಿದೆ ಎಂದರು.
ಇಂತಹ ನಂಬಿಕೆ ಗಟ್ಟಿಗೊಳಿಸಿ ಬದುಕು ನಡೆಸಲು ಪ್ರತಿ ಹಿಂದುವಿನಲ್ಲಿ ದೇಶಭಕ್ತಿ, ದೈವ ಭಕ್ತಿ, ಹಾಗೂ ಸಂಘಟನಾ ಶಕ್ತಿಯನ್ನು ಬಲಗೊಳಿಸಲು ವಿಶ್ವ ಹಿಂದು ಪರಿಷತ್ತು ದೇಶಾದ್ಯಂತ 25 ಸಾವಿರ ಸ್ಥಾನಗಳಲ್ಲಿ ಸಾಪ್ತಾಹಿಕ ಸತ್ಸಂಗಗಳನ್ನು ನಡೆಸುತ್ತಿದೆ ಎಂದರು.
ಪ್ರತಿಯೊಬ್ಬರೂ ಇಂತಹ ಸತ್ಸಂಗ ಚಟುವಟಿಕೆಗಳಲ್ಲಿ ಭಾಗವಹಿಸಿ ನಮ್ಮ ಪವಿತ್ರವಾದ ಧರ್ಮ, ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕಿದೆ ಎಂದೂ ಮನವಿ ಮಾಡಿದರು.
ಪ್ರಾಂತೀಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಕಡಕಿನಬಯಲು, ಶಿರಸಿ ಜಿಲ್ಲಾ ಸೇವಾ ಪ್ರಮುಖ ಶ್ರೀಧರ ಭಟ್ ಉಪಸ್ಥಿತರಿದ್ದರು. ಮೇಲಿನೋಣಿಕೇರಿ ದೇವತೇಮನೆ ಸುತ್ತಲಿನ ಭಾಗಗಳಿಂದ ಮಹಿಳೆಯರು, ಯುವಕರೂ ಸೇರಿದಂತೆ 40 ಕ್ಕೂ ಹೆಚ್ಚು ಮಂದಿ ಸತ್ಸಂಗದಲ್ಲಿ ಭಾಗವಹಿಸಿದ್ದರು.