ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢ ಶಾಲೆ ಬಿಸಲಕೊಪ್ಪದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಭಿಯಾನದ ನಿಮಿತ್ತ ಅರಣ್ಯ ಮಹಾವಿದ್ಯಾಲಯದ ಸಹಯೋಗ ದಲ್ಲಿ ಪರಿಸರ ಸ್ನೇಹಿ ಗಣೇಶ ತಯಾರಿಸುವ ಕಾರ್ಯಕ್ರಮ ನಡೆಯಿತು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ ಪರಿಸರದ ಕಾಳಜಿ ಅಗತ್ಯ ಎಂದರು. ಸಂಸ್ಥೆಯ ಸದಸ್ಯ ಗಣಪತಿ.ಕೆ.ಬಿಸಲಕೊಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಅರಣ್ಯ ಮಹಾವಿದ್ಯಾಲಯ ಪ್ರಾಧ್ಯಾಪಕ ರಮೇಶ ರಾಠೋಡ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮ ಉದ್ದೇಶ ವಿವರಿಸಿದರು. ಮಣ್ಣಿನ ಮೇಲ್ಪದರ ರಕ್ಷಣೆ ಹಾಗೂ ಜಲ ಮಾಲಿನ್ಯ ನಿಯಂತ್ರಣಕ್ಕೆ ಈ ಕಾರ್ಯಕ್ರಮ ಸಹಕಾರಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಕ್ಕಳಲ್ಲಿ ಪರಿಸರ ಪ್ರೇಮ ಈಗಿನಿಂದಲೇ ಬೆಳೆಯಲು ಈ ಕಾರ್ಯಕ್ರಮ ಸಹಕಾರಿ ಎಂದರು. ಶಿಕ್ಷಕ ಲೋಕನಾಥ ಹರಿಕಂತ್ರ ನಿರ್ವಹಿಸಿದರೆ ದೈಹಿಕ ಶಿಕ್ಷಕ ಸತೀಶ ಹೆಗಡೆ ವಂದಿಸಿದರು. ನಂತರ ಮಕ್ಕಳು ಹಿಟ್ಟು ಮತ್ತು ಅರಿಶಿಣದಿಂದ ಗಣಪತಿ ತಯಾರಿಸಿ ಸಂಭ್ರಮಿಸಿದರು.