ಸಿದ್ದಾಪುರ: ತಾಲೂಕಿನ ಕಾನಸೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಯವರು ಈ ವರ್ಷ 50 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವನ್ನು ಸರಳವಾಗಿ ಕಾನಸೂರಿನ ಸಾರ್ವಜನಿಕ ಗಣೇಶ ಮಂಟಪದಲ್ಲಿ ಆಚರಿಸಿದರು.
ಸ್ವಾತಂತ್ರ್ಯದ ಹೋರಾಟ ಸಮಯದಲ್ಲಿ ಬಾಲಗಂಗಾಧರ ನಾಥ ತಿಲಕರು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಣೆಗೆ ತಂದಿದ್ದರು. ಅಂದಿನಿಂದ ದೇಶದ ಎಲ್ಲಾ ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಪ್ರಾರಂಭವಾಯಿತು.
ಅದರಂತೆ 1971ರಲ್ಲಿ ತರುಣ ರೈತ ಸಂಘದ ಅಧ್ಯಕ್ಷ ರಾದ ಎಂ.ಎಸ್ ಹೆಗಡೆ ಮುತ್ಮುರ್ಡು ರವರು ಕಾನಸೂರಿನಲ್ಲಿ ಪುಟ್ಟದಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದರು. ನಂತರ ಅದಕ್ಕೊಂದು ಸಮಿತಿಯೂ ರಚನೆಯೂ ಆಯಿತು. ಕಾಲಕ್ರಮೇಣ ಸದ್ಯ ಗಣೇಶೋತ್ಸವ ನಡೆಸುತ್ತಿರುವ ಸುಂದರವಾದ ಸಭಾಭವನ ಅಂದಿನ ಸಂಸದ ದಿ. ದೇವರಾಯ ನಾಯ್ಕ ಗವಿನಗುಡ್ಡ ಹಾಗೂ ದಾನಿಗಳ ಸಹಕಾರದೊಂದಿಗೆ ನಿರ್ಮಾಣವಾಯಿತು. ಇಲ್ಲಿ ಯಾವುದೇ ಜಾತಿ ಧರ್ಮ ಮತಗಳ ಬೇಧವಿಲ್ಲದೆ ಎಲ್ಲಾ ಧರ್ಮದವರು ಸೇರಿ ಗಣೇಶನಿಗೆ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ಆಗಿನ ಕಾಲದಲ್ಲಿ ಸುತ್ತಮುತ್ತಲಿನ 90 ಹಳ್ಳಿಗಳಲ್ಲಿ ಇಷ್ಟೊಂದು ಅದ್ಧೂರಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿರಲಿಲ್ಲ. ಆ ಭಾಗದಲ್ಲಿ ಮೊದಲು ಸಾರ್ವಜನಿಕ ಗಣೇಶೋತ್ಸವವನ್ನು ಆಚರಣೆಗೆ ತಂದ ಹೆಗ್ಗಳಿಕೆ ಕಾನಸೂರಿನವರಿಗೆ ಹಾಗೂ ತರುಣ ರೈತ ಸಂಘದವರಿಗೆ ಸಲ್ಲುತ್ತದೆ.
ಈ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಭಾಭನಕ್ಕೆ ಹಲವಾರು ಗಣ್ಯರು ಭೇಟಿ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಕಾನಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಇದೇ ಸಭಾಭವನದಲ್ಲಿ ಕಾರ್ಯಕ್ರಮ ನಡೆಸಿದ್ದರು. ಅಂದಿನಿಂದ ಇಂದಿನವರೆಗೂ ಈ ಸಭಾಭವನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇದೆ.
ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಕಳೆದ 49 ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಸರ್ವಧರ್ಮದವರು ಸೇರಿ ಆಚರಿಸಿಕೊಂಡು ಬಂದಿದ್ದೇವೆ. ಕೊರೋನಾ ಕಾರಣದಿಂದ ಸರ್ಕಾರದ ಸೂಚನೆ ಯನ್ನು ಪಾಲಿಸಿ ಎರಡು ದಿನಗಳ ಗಣೇಶೋತ್ಸವ ವನ್ನು ಆಚರಿಸುತ್ತಿದ್ದೇವೆ. ಈ ವರ್ಷ ನಮ್ಮ ಗಣೇಶೋತ್ಸವಕ್ಕೆ 50ರ ಸಂಭ್ರಮ ವಾಗಿದ್ದು ಬಹಳ ಸಂತಸ ತಂದಿದೆ.