ಮುಂಡಗೋಡ: ಆರೋಗ್ಯ ಮತ್ತು ಶಿಕ್ಷಣ ಎರಡು ಪ್ರಮುಖ ಕ್ಷೇತ್ರಗಳು. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರದೇ ಹೋದರೆ ಬಡವರಿಗೆ ತೊಂದರೆ ಆಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಧಾರವಾಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಇವರ ಸಹಯೋಗದಲ್ಲಿ ಅಳವಡಿಸಲಾದ 14ಲಕ್ಷ ರೂ. ಮೌಲ್ಯದ ಎರಡು ಡಯಾಲಿಸಿಸ್ ಯಂತ್ರಗಳ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿಯೇ ಬಡತನ, ನಿರಕ್ಷರತೆ ಅತಿ ಹೆಚ್ಚಾಗಿ ಇರುವ ತಾಲೂಕು ಇದು. ತಾಲೂಕಿನಲ್ಲಿ ಒಟ್ಟು 14 ಜನರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿಗೆ ಹೋಗಲು ಅವರಿಗೆ ಹೆಚ್ಚು ವೆಚ್ಚ ತಗಲುತ್ತದೆ. ಡಯಾಲಿಸಿಸ್ ಮಷಿನ್ ಇಲ್ಲದೆ ಬಡವರು ಕಷ್ಟದಲ್ಲಿದ್ದರು ಈಗ ಅವರಿಗೆ ತುಂಬಾ ಅನುಕೂಲವಾಗಿದೆ. ಯಲ್ಲಾಪುರದಲ್ಲಿ ಏನು ಸುಧಾರಣೆ ಮಾಡುತ್ತೇನೋ ಪಟ್ಟಣದಲ್ಲಿಯೂ ಅದನ್ನೇ ಮಾಡುತ್ತೇನೆ. ಚುನಾವಣೆವರೆಗೆ ಮಾತ್ರ ರಾಜಕಾರಣ ಮಾಡುತ್ತೇನೆ ನಂತರ ಮಾಡುವುದಿಲ್ಲ ಎಂದರು.
ಎಲ್ಲವೂ ಸರ್ಕಾರದಿಂದಲೇ ಆಗಬೇಕು ಎಂದರೆ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯ ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಬಂದ ಬಡವರಿಗೆ ತೊಂದರೆಯಾಗದಂತೆ ಮಾನವೀಯತೆಯಿಂದ ಕಾಣಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕೆ.ವಿ.ಜಿ.ಬಿ. ಚೇರ್ಮನ್ ಪಿ.ಗೋಪಿಕೃಷ್ಣ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ವಿಶೇಷವಾಗಿ ಗ್ರಾಮೀಣ ಭಾಗದ ಬಡ ರೋಗಿಗಳಿಗೆ ವರವಾದ ಡಯಾಲಿಸಿಸ್ ಯಂತ್ರಗಳನ್ನು ಆಸ್ಪತ್ರೆಗೆ ಅಳವಡಿಸಲಾಗಿದೆ. ಇದರಿಂದ ದುಬಾರಿ ವೆಚ್ಚ ಮತ್ತು ದೂರದ ಆಸ್ಪತ್ರೆಗಳಿಗೆ ಅಲೆದಾಟ ತಪ್ಪಿದಂತಾಗಿದೆ ಎಂದರು.
ಮಾಸ್ಟರ್ ಟ್ರೇನರ್ ಸುಧೀರ ಕುಲ್ಕರ್ಣಿ ಮತ್ತು ಸೆಲ್ಕೋ ಸೋಲಾರ ಸಿಇಒ ಮೋಹನ ಹೆಗಡೆ ಮಾತನಾಡಿದರು. ನಂತರ ಸಚಿವರು ತಾಲೂಕು ಆಸ್ಪತ್ರೆ ಹಿಂಭಾಗದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಶಂಕು ಸ್ಥಾಪನೆ ನೆರವೇರಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಶರದ ನಾಯಕ, ಡಾ.ಎಚ್.ಎಫ್.ಇಂಗಳೆ, ಹರಿಪ್ರಕಾಶ ಕೋಣೆಮನೆ, ಪ.ಪಂ.ಅಧ್ಯಕ್ಷೆ ರೇಣುಕಾ ಹಾವೇರಿ, ಸದಸ್ಯೆ ಜಯಸುಧಾ ಭೋವಿವಡ್ಡರ ಮುಖ್ಯಾಧಿಕಾರಿ ಸಂಗನಬಸಯ್ಯ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಶೇಖರ ಲಮಾಣಿ, ತಾಲೂಕು ಆಸ್ಪತ್ರೆ ಸಿಬ್ಬಂದಿ ಮತ್ತಿತರರಿದ್ದರು. ವಿ.ವಿ.ಕುರ್ಡೇಕರ ಪ್ರಾರ್ಥಿಸಿದರು. ಎಸ್.ಎಸ್.ಪಟ್ಟಣಶೆಟ್ಟಿ, ಮಂಜುನಾಥ ಭಾಗ್ವತ ಮತ್ತು ಉಮೇಶ ಪುದಾಳೆ ನಿರ್ವಹಿಸಿದರು.