ಮುಂಡಗೋಡ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಗಾಂಧಿ ನಗರ, ಹಳೂರ ಓಣಿ, ಟಿಎಪಿಸಿಎಂಎಸ್, ಕಾಳಗನಕೊಪ್ಪ, ನೆಹರು ನಗರ, ಹೆಸ್ಕಾಂ ಮತ್ತು ನಂದೀಶ್ವರ ನಗರದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಸರಳ ರೀತಿಯಲ್ಲಿ ವಿಸರ್ಜಿಸಲಾಯಿತು.
ಗೆಳೆಯರ ಬಳಗದ ಸಾರ್ವಜನಿಕ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು. ಗಣಪತಿ ಮೂರ್ತಿಯನ್ನು ಹೊತ್ತ ವಾಹನ ಬಸವನ ಬೀದಿಯಿಂದ ಹೊರಟು ಶಿವಾಜಿ ಸರ್ಕಲ್ ನಂತರ ಯಲ್ಲಾಪುರ ರಸ್ತೆ ಮೂಲಕ ಮೆರವಣಿಗೆ ಸಾಗಿತು. ಯುವಕರು ಪಟಾಕಿಗಳನ್ನು ಸಿಡಿಸುತ್ತ ಗಣಪತಿಗೆ ಜೈಕಾರ ಹಾಕುತ್ತ ಕುಣಿದು ಕುಪ್ಪಳಿಸಿದರು. ಕೊನೆಗೆ ಬಸವನ ಬೀದಿಯಲ್ಲಿ ಇರುವ ಬಸವನ ಹೊಂಡದಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಉಮೇಶ ಬಿಜಾಪುರ, ಮಂಜುನಾಥ ಹರಮಲಕರ, ವಿಠ್ಠಲ ಬಾಳಂಬೀಡ, ನಾಗಭೂಷಣ ಹಾವಣಗಿ, ಫಣಿರಾಜ ಹದಳಗಿ, ಕಿರಣ ಶೇರಖಾನೆ, ಮಹೇಶ ಪಾಟೀಲ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.