ಮುಂಡಗೋಡ: ಈ ಕ್ಷೇತ್ರಕ್ಕೆ ಕಾಂಗ್ರೆಸ್ ಹೊಸ ನಾಯಕರು ಬಂದು ಓಡಾಡುತ್ತಿದ್ದಾರೆ. ಅವರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ನಾನು ಮತ್ತು ನನ್ನ ಪಕ್ಷ ನೋಡಿಕೊಳ್ಳುತ್ತದೆ. ಇಂತಹ ರಾಜಕಾರಣವನ್ನು ಜೀವನ ಉದ್ದಕ್ಕೂ ನೋಡಿಕೊಂಡು ಬಂದಿದ್ದೇನೆ ಎಂದು ಕೆಪಿಸಿಸಿ ಸದಸ್ಯ ಕಾಂಗ್ರೆಸ್ ಪ್ರಶಾಂತ್ ದೇಶಪಾಂಡೆ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪರೋಕ್ಷವಾಗಿ ಟಾಂಗ್ ನೀಡಿದರು.
ಅವರು ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಬೂತ್ ಅಧ್ಯಕ್ಷರ ಸಮಾವೇಶದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ನನ್ನ ಸಾರ್ವಜನಿಕ ಅನುಭವದಲ್ಲಿ ಕಾರ್ಯಕ್ರಮ ಮತ್ತು ರಾಜಕೀಯ ಮಾಡಿದ್ದೇ ಬೂತ್ ಮಟ್ಟದಿಂದ. ಪಕ್ಷವನ್ನು ಯಾವ ರೂಪದಲ್ಲಿ ತೆಗೆದುಕೊಂಡು ಹೊಗಬೇಕು. ಪಕ್ಷವನ್ನು ಗಟ್ಟಿ ಇಡಲು ಏನು ಸಾಧ್ಯತೆ ಇದೆ ಎಂಬುದರ ಬಗ್ಗೆ ಪಾಠ ಕಲಿಯುತ್ತೇವೆ.
ಯಾವುದೇ ಪಕ್ಷಕ್ಕೆ ಪಕ್ಷ ಬದುಕ ಬೇಕೆಂದರೆ ಹಾಗೂ ಸಂಘಟನೆಯಾಗಿ ಉಳಿಯಬೇಕಾದರೆ ಆಯಾ ಬೂತ್ ಮಟ್ಟದ ಕಾರ್ಯಕರ್ತನಿಂದ ಮಾತ್ರ ಸಾಧ್ಯ. ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷರ ಆದೇಶದಂತೆ ಬೂತ್ ಅಧ್ಯಕ್ಷರ ಸಮಾವೇಶಗಳು ರಾಜ್ಯಾದ್ಯಂತ ನಡೆಯುತ್ತಿದೆ. ಪಕ್ಷ ಸಂಘಟನೆಗೆ ಪ್ರತಿ ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಹಾಕಿಕೊಳ್ಳಬೇಕು.
ರಾಜಕೀಯದಲ್ಲಿ ಕೀಳರಿಮೆ ಇರಬಾರದು. ಪಕ್ಷವನ್ನು ಗಟ್ಟಿ ಇಟ್ಟುಕೊಳ್ಳಲು ವೇದಿಕೆಯ ಮೇಲೆ ಇರುವ ನಾಯಕ, ಮುಖಂಡರಿಂದ ಪಕ್ಷ ಸಂಘಟನೆಯಾಗುವುದಿಲ್ಲ. ಕಟ್ಟಕಡೆಯ ಬೂತ ಮಟ್ಟದ ಕಾರ್ಯಕರ್ತನಿಂದ ಮಾತ್ರ ಸಾಧ್ಯ. ಅವರನ್ನು ಗೌರವಿಸಿದರೆ ಮಾತ್ರ ಸಂಘಟನೆಯಾಗುತ್ತದೆ.
ಕಷ್ಟ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಕೆಲ ನಾಯಕರು ಪಕ್ಷವನ್ನು ಬೆಳಸಿದ್ದಾರೆ ನಾನೂ ಈ ಹಿಂದೆ ಜಿಲ್ಲಾಧ್ಯಕ್ಷನಾಗಿದ್ದಾಗ ಕಷ್ಟಪಟ್ಟು ಪಾರ್ಟಿ ಕಟ್ಟಿದ್ದೇನೆ. ಆ ಪ್ರತಿಫಲವೇ ಇಂದು ಗ್ರಾಮೀಣ, ಸ್ಥಳೀಯ ಸಂಘ, ಸಂಸ್ಥೆಗಳಿಂದ ಕೇಂದ್ರದವರೆಗೆ ನಮ್ಮ ಪಕ್ಷ ಅಧಿಕಾರಿ ಹಿಡಿಯುವಲ್ಲಿ ಸಫಲವಾಗಿದೆ.
ಪಕ್ಷಕ್ಕಾಗಿ ಯಾರೂ ಅನಿವಾರ್ಯವಲ್ಲ ಪಕ್ಷಕ್ಕೆ ನಾವು ಅನಿವಾರ್ಯ. ನನ್ನಿಂದಲೆ ಪಕ್ಷ, ನನ್ನಿಂದಲೆ ಪಕ್ಷ ಬೆಳೆಯಬೇಕು ಎಂದು ಯಾರೂ ತಿಳಿಯಬಾರದು. ವಿರೋಧ ಪಕ್ಷದವರನ್ನು ಎದರಿಸಲು ಕಷ್ಟದ ಕೆಲಸವಲ್ಲ ಆದರೆ ಪಕ್ಷದ ಒಳವಿರೋಧಿಗಳನ್ನು ಎದುರಿಸಲು ಬಹಳ ಕಷ್ಟವಾಗುತ್ತದೆ. ಇಲ್ಲಿ ಯಾರು ಹೊರಗಿನವರು, ಒಳಗಿನವರು ಅಲ್ಲ. ಯಾರು ಪಕ್ಷದ ಸಿದ್ಧಾಂತ ನಂಬಿ ಬಂದಿರೂತ್ತಾರೋ ಆ ಕ್ಷಣದಿಂದ ಪಕ್ಷದ ಕಾರ್ಯಕರ್ತನಾಗುತ್ತಾನೆ. ಯಾರು ವೈಯಕ್ತಿಕ ತೇಜೋವಧೆ ಮಾಡಬಾರದು ಎಂದು ಕಿವಿಮಾತು ಹೇಳಿದ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.
5 ಹೊಸ ಕಾರ್ಯಕ್ರಮಗಳನ್ನು ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೀಡಿದೆ. ಅಭಿವೃದ್ಧಿ ಮತ್ತು ಹಣ ಇದ್ದರೆ ರಾಜಕೀಯದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸಾಮಾನ್ಯ ಬಡವರ ಜತೆ ಕೂಡಿರಬೇಕು. ಸದ್ಯ ಜಿಲ್ಲಾ, ತಾಪಂ ಚುನುವಣೆಯ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ಅಭ್ಯರ್ಥಿಗಳ ಆಯ್ಕೆಯನ್ನು ನಾಯಕರು ಮತ್ತು ಪಕ್ಷ ನಿರ್ಧಾರ ಮಾಡುತ್ತದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.
ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಮುಖಂಡರುಗಳಾದ ವಿವೇಕ ಹೆಬ್ಬಾರ, ರವಿಗೌಡ ಪಾಟೀಲ, ಗೋವಿಂದ ನಾಯ್ಕ, ನಾಗಭೂóಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ಪ.ಪಂ.ಅಧ್ಯಕ್ಷೆ ರೇಣುಕಾ ಹಾವೇರಿ, ರೇಖಾ ಅಂಡಗಿ, ಮಹೇಶ ಹೊಸಕೊಪ್ಪ, ವಿಠ್ಠಲ ಬಾಳಂಬೀಡ, ಸಂತೋಷ ತಳವಾರ, ಗಣೇಶ ಶಿರಾಲಿ, ಭರತ ಹದಳಗಿ ಸೇರಿದಂತೆ ಇತರರಿದ್ದರು ಮಂಜುನಾಥ ಪಾಟೀಲ ನಿರ್ವಹಿಸಿದರು