ಕುಮಟಾ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಡಳಿತಾಧಿಕಾರಿ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಬಿಇಓ ರಾಜೇಂದ್ರ ಎಲ್. ಭಟ್ ಮಾತನಾಡಿ, ತಾಲೂಕಿನಲ್ಲಿ ಒಟ್ಟೂ 14 ಶಿಕ್ಷಕರಿಗೆ ಮಾತ್ರ ಕಾರಣಾಂತರಗಳಿಂದ ಕರೊನಾ ಲಸಿಕೆ ಇನ್ನೂ ಆಗಿಲ್ಲ. ಉಳಿದ ಎಲ್ಲ ಶಿಕ್ಷಕರು, ಸಿಬ್ಬಂದಿ ಸಹಿತ ಎಲ್ಲರಿಗೂ ಲಸಿಕೆ ನೀಡಲಾಗಿದೆ ಎಂದರು.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಒಟ್ಟೂ 11521 ವಿದ್ಯಾರ್ಥಿಗಳು ನೋಂದಣಿಯಾಗಿದ್ದು ಸಮವಸ್ತ್ರ ಬರಬೇಕಿದೆ. ಬುಕ್ ಬ್ಯಾಂಕ್ ಆಧಾರದಲ್ಲಿ ಸುಮಾರು 39% ಮಕ್ಕಳಿಗೆ ಪುಸ್ತಕ ಒದಗಿಸಲಾಗಿದೆ. ಅನುದಾನ ರಹಿತ ಶಾಲೆಗಳ 132 ಶಿಕ್ಷಕರಿಗೆ ಕರೊನಾ ಪ್ಯಾಕೇಜ್ ಅಡಿಯಲ್ಲಿ ತಿಂಗಳಿಗೆ ತಲಾ 5 ಸಾವಿರ ರೂಗಳಂತೆ 2 ತಿಂಗಳ ಸಂಬಳವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಆಡಳಿತಾಧಿಕಾರಿ ಈಶ್ವರ ನಾಯ್ಕ ಮಾತನಾಡಿ, ಇಷ್ಟರಲ್ಲಾಗಲೇ ಎಲ್ಲ ಶಿಕ್ಷಕರಿಗೆ ಎರಡೂ ಡೋಸ್ ಲಸಿಕೆ ಆಗಬೇಕಿತ್ತು. ಇನ್ನೂ ತನಕ ಕೆಲವರು ಒಂದು ಡೋಸ್ನ್ನೂ ಪಡೆದಿಲ್ಲದಿರುವುದು ಸಮಂಜಸವಲ್ಲ ಎಂದರು. ಅಡುಗೆ ವಿಭಾಗದವರಿಗೂ, ವಿದ್ಯಾರ್ಥಿಗಳ ಪಾಲಕರಿಗೂ ಲಸಿಕೆ ಕೊಡಿಸಬೇಕು ಎಂದರು.
ಡಾ. ಆಜ್ಞಾ ನಾಯಕ ಮಾತನಾಡಿ, ಶಿಕ್ಷಣ ಇಲಾಖೆ ಲಸಿಕೆ ಪಡೆದುಕೊಳ್ಳಲು ಬಾಕಿ ಇರುವವರೆಲ್ಲರ ವಿವರ ನೀಡಿದರೆ ಲಸಿಕೆ ವಿತರಣೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಕೆಲವು ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸಮಯಮಿತಿ ಮುಗಿದಿದ್ದರೂ ಎರಡನೇ ಡೋಸ್ ಪಡೆದಿಲ್ಲ ಎಂದರು.
ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಚೇಳ್ಕರ್ ಮಾತನಾಡಿ, ಜಲಜೀವನ ಮಿಷನ್ ಅಡಿಯಲ್ಲಿ ಒಟ್ಟೂ 32 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 7 ಕಾಮಗಾರಿ ಪೂರ್ಣಗೊಂಡಿದೆ. 19 ಕಾಮಗಾರಿ ಪ್ರಗತಿಯಲ್ಲಿದ್ದು 6 ಕಾಮಗಾರಿಗಳು ಆರಂಭಿಕ ಹಂತದಲ್ಲಿದೆ ಎಂದರು.
ಹೆಸ್ಕಾಂ ಎಇ ರಾಜೇಶ ಮಡಿವಾಳ, ದೀನದಯಾಳ ಯೋಜನೆಯಡಿ 1366 ಫಲಾನುಭವಿಗಳನ್ನು ಗುರುತಿಸಿ 6.90 ಕೋಟಿ ರೂ ಪ್ರಸ್ತಾವನೆ ಕಳುಹಿಸಲಾಗಿತ್ತು. 1 ಕೋಟಿ ರೂ ಮಂಜೂರಾತಿ ದೊರಕಿ ಅಳಕೋಡ, ನಾಡುಮಾಸ್ಕೇರಿ, ಸೊಪ್ಪಿನಹೊಸಳ್ಳಿ, ಕೋಡ್ಕಣಿ ಪಂಚಾಯಿತಿ ವ್ಯಾಪ್ತಿಯ 474 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.
ಇಓ ಸಿ.ಟಿ.ನಾಯ್ಕ ಪ್ರತಿಕ್ರಿಯಿಸಿ, ಹೆಸ್ಕಾಂನಲ್ಲಿ ನಡೆಯುವ ಗ್ರಾಹಕ ಸಂವಾದ ಸಭೆಯನ್ನು ಗ್ರಾಮೀಣ ಭಾಗದಲ್ಲೂ ನಡೆಸುವ ಬಗ್ಗೆ ಕ್ರಮವಹಿಸಿ. ತಾಪಂ ಸಭೆಗಳಲ್ಲಿ ಜನಪ್ರತಿನಿಧಿಗಳಿದ್ದರೆ ಮಾತ್ರ ಅಧಿಕಾರಿಗಳು ಹಾಜರಾಗುವುದು ಸರಿಯಲ್ಲ. ಆಡಳಿತಾಧಿಕಾರಿಗಳು ನಡೆಸುವ ಸಭೆಗೂ ಅಷ್ಟೇ ಗಂಭೀರತೆ ಇದೆ ಎಂಬ ಸಂದೇಶ ಸಮಾಜಕ್ಕೆ ತಲುಪಬೇಕಾಗುತ್ತದೆ ಎಂದರಲ್ಲದೇ ಸಭೆಯಲ್ಲಿ ಹಾಜರಿಲ್ಲದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಇನ್ನಿತರರಿಗೆ ನೋಟೀಸ್ ನೀಡುವಂತೆ ತಾಪಂ ವ್ಯವಸ್ಥಾಪಕ ಎಂ.ಎಂ.ಹೆಗಡೆ ಅವರಿಗೆ ಇಓ ಸಿ.ಟಿ.ನಾಯ್ಕ ತಿಳಿಸಿದರು.