ಶಿರಸಿ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಶಿರಸಿಯ ಅದ್ವೈತ ಸ್ಕೇಟರ್ಸ ಮತ್ತು ಸ್ಪೋರ್ಟ್ಸ್ ಕ್ಲಬಿನ ಕ್ರೀಡಾಪಟುಗಳು ತಮ್ಮ ನೆಚ್ಚಿನ ಸ್ಕೇಟಿಂಗ್ ತರಬೇತಿ ನೀಡುವ ಶಿಕ್ಷಕ ಶ್ಯಾಮಸುಂದರ ಮತ್ತು ತರುಣ ಗೌಳಿ ಇವರನ್ನು ಗೌರವಿಸಿ ಸನ್ಮಾನಿಸಿ, ಗೌರವಿಸಿದರು.
ಗುರು ವಂದನೆ ಸ್ವೀಕರಿಸಿ ಶಿಕ್ಷಕ ಶ್ಯಾಮಸುಂದರ ಮಾತನಾಡಿ, ಜೀವನದಲ್ಲಿ ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಮಹತ್ವವನ್ನು ನೀಡಿರಿ. ಕಠಿಣ ಪರಿಶ್ರಮದಿಂದ ಎರಡೂ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿ ಎಂದು ಕ್ರೀಡಾಪಟುಗಳನ್ನು ಹಾರೈಸಿದರು.
ಇನ್ನೊಬ್ಬ ಸ್ಕೇಟಿಂಗ್ ತರಬೇತಿ ಶಿಕ್ಷಕ ತರುಣ ಗೌಳಿ ಮಾತನಾಡಿ ಸ್ಕೇಟಿಂಗ್ ತರಬೇತಿಯನ್ನು ನೀಡುವ ಸಂದರ್ಭದಲ್ಲಿ ತಾನೂ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ ಸ್ಕೇಟಿಂಗ್ ತರಬೇತಿಯನ್ನು ನೀಡುತ್ತಾ ಕಲಿಯುತ್ತಿದ್ದೇನೆ. ನಾವು ಪ್ರತಿ ಕ್ಷಣವೂ ಕಲಿಯುವುದು ಇದ್ದೇ ಇದೆ. ಶಿರಸಿಯಲ್ಲಿ ಸ್ಕೇಟಿಂಗ್ ಕಲಿಕೆಗೆ ಹಾಗೂ ಕ್ರೀಡೆಗೆ ಪಾಲಕರು ತಮ್ಮ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಸಿಯ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಫಾದರ್ ಸಂದೇಶ ಇವರನ್ನು ಗೌರವಿಸಲಾಯಿತು. ಶಿರಸಿಗರಿಗೆ ಸ್ಕೇಟಿಂಗ್ ಕ್ರೀಡೆಯನ್ನು ಪರಿಚಯಿಸಿ ಸರಕಾರದ ಯಾವೂದೇ ಅನುದಾನವಿಲ್ಲದೇ ಕ್ರೀಡಾಪಟುಗಳಿಗಾಗಿ ಸುಸಜ್ಜಿತ ಸ್ಕೇಟಿಂಗ್ ಕ್ರೀಡಾಂಗಣವನ್ನು ನಿರ್ಮಿಸಿ ಸಾವಿರಾರು ಕ್ರೀಡಾಪಟುಗಳು ಇಂದು ವಿಶೇಷವಾದ ಸ್ಕೇಟಿಂಗ್ ಕ್ರೀಡೆಯನ್ನು ಕಲಿತು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಕಾರಣಕರ್ತರಾದ ಕ್ಲಬಿನ ಸಂಸ್ಥಾಪಕ ಅಧ್ಯಕ್ಷ ಕಿರಣಕುಮಾರ್ ಇವರನ್ನು ಸ್ಕೇಟಿಂಗ್ ಕ್ರೀಡಾಪಟುಗಳು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಅದ್ವೈತ ಸ್ಕೇಟಿಂಗ್ ಕ್ಲಬಿನ ಕ್ರೀಡಾಪಟುಗಳೇ ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಸ್ಕೇಟಿಂಗ್ ಕ್ಲಬಿನ ಕ್ರೀಡಾಪಟುಗಳಿಂದ ಹಾಗೂ ಪಾಲಕರಿಂದ ಸರ್ವಪಲ್ಲಿ ಡಾ ರಾಧಾಕೃಷ್ಣನ್ ಇವರ ಭಾವಚಿತ್ರಕ್ಕೆ ಹೂಮಾಲೆಯನ್ನು ಹಾಕಿ ಗೌರವಿಸಿದರು.
ಕೊನೆಯಲ್ಲಿ ತಮಗೆ ಸ್ಕೇಟಿಂಗ್ ಕಲಿಸಿದ ಗುರುಗಳನ್ನು ರಿಂಕಿನ ಮಧ್ಯದಲ್ಲಿರಿಸಿ ಎರಡೂ ಕೈಗಳನ್ನು ಜೋಡಿಸಿ ಸ್ಕೇಟಿಂಗ್ ಮಾಡುತ್ತಾ ಗುರು ನಮನವನ್ನು ಸಲ್ಲಿಸಿದ ಪರಿಯು ಕ್ರೀಡಾಪಟುಗಳಲ್ಲಿ ಗುರುಭಕ್ತಿಯು ಎದ್ದು ಕಾಣುತ್ತಿತ್ತು.
ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ ಸ್ಕೇಟಿಂಗ್ ಕ್ಲಬಿನ ಹತ್ತು ಪಾಲಕ ಪೋಷಕರನ್ನೊಳಗೊಂಡ ಟ್ರ್ಯಾಕ್ ಟೀಮ್ ನ್ನು ರಚಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಕೇಟಿಂಗ್ ಕ್ಲಬಿನ ಪಾಲಕ ಪೋಷಕರು ಉಪಸ್ಥಿತರಿದ್ದರು.