ಸಿದ್ದಾಪುರ: ಕುರುಕ್ಷೇತ್ರದ ಸಮರ ಸಂಗ್ರಾಮದ ಭಾಗವಾದ ಕರ್ಣಪರ್ವ ಆಖ್ಯಾನದಲ್ಲಿ ಪುತ್ರ ಶೋಕದಲ್ಲಿ ದಾನ ಶೂರ ಕರ್ಣ, ರಣ ರಂಗದಲ್ಲಿ ಹೂತು ಹೋದ ರಥದ ಚಕ್ರ ಎಬ್ಬಿಸಲಾಗದೇ ಶಲ್ಯನ ಅಸಹಕಾರ, ದಾನದ ಗುಣವೇ ಸೋಲಿಗೆ ಕಾರಣವಾದ ಸಂದರ್ಭವನ್ನು ಮನೋಜ್ಞವಾಗಿ ಬಿಂಬಿಸಿದ ಪ್ರಸಂಗ ನಡೆಯಿತು.
ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನವು ನವ ದೆಹಲಿಯ ಕಲ್ಚರಲ್ ಡಿಪಾರ್ಟಮೆಂಟ್ ಪ್ರಾಯೋಜಕತ್ವದಲ್ಲಿ ಕಲಗದ್ದೆ ಶ್ರೀ ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದ ಆವಾರದಲ್ಲಿ ಹಮ್ಮಿಕೊಂಡ ಸಮರ ಸಂಗ್ರಾಮ ಯಕ್ಷಗಾನ ಪ್ರದರ್ಶನ ಕಲಾ ಪ್ರೇಕ್ಷಕರಿಗೆ ರಸದೌತಣ ನೀಡಿತು.
ಕರ್ಣನಾಗಿ ವಿನಾಯಕ ಹೆಗಡೆ ಕಲಗದ್ದೆ, ಶಲ್ಯನಾಗಿ ಅಶೋಕ ಭಟ್ಟ ಸಿದ್ದಾಪುರ, ಕೌರವನಾಗಿ ಮೋಹನ ಹೆಗಡೆ ಹೆರವಟ್ಟ, ಅರ್ಜುನನಾಗಿ ಪ್ರಭಾಕರ ಹಣಜಿಬಯಲು, ಭೀಮನಾಗಿ ವೆಂಕಟೇಶ ಬೊಗ್ರಿಮಕ್ಕಿ, ಬ್ರಾಹ್ಮಣನಾಗಿ ಅವಿನಾಶ ಕೊಪ್ಪ, ವೀರ ವೃಷಸೇನನಾಗಿ ಕು. ತುಳಸಿ ಹೆಗಡೆ, ಮಡಸೂರು ದತ್ತಾತ್ರಯ ಕಥಾನಕ ಕಟ್ಟಿಕೊಟ್ಟರು. ಎಂ.ಆರ್.ನಾಯ್ಕ ಕರ್ಸೆಬೈಲ್ ವೇಷ ಭೂಷಣ ಸಹಕಾರ ನೀಡಿದರು.
ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮಾಧವ ಭಟ್ಟ ಕೊಳಗಿ, ಮಹೇಶ ಹೆಗಡೆ, ಮದ್ದಲೆಯಲ್ಲಿ ಶಂಕರ ಭಾಗವತ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಪಾಲ್ಗೊಂಡರು. ನಾಲ್ಕು ಗಂಟೆಗಳ ಕಾಲ ಈ ಯಕ್ಷಗಾನ ಅರ್ಥಪೂರ್ಣವಾಗಿ ಹೊರ ಹೊಮ್ಮಿತು.
ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಚಾಲನೆ ನೀಡಿದ ಪ್ರಜಾವಾಣಿ ದೈನಿಕದ ಸಂಪಾದಕ ರವೀಂದ್ರ ಭಟ್ಟ ಐನಕೈ, ಯಕ್ಷಗಾನವನ್ನು ಇಡೀ ರಾಜ್ಯದೆಲ್ಲಡೆ ತಲುಪಿಸುವ ಕಾರ್ಯ ಆಗಬೇಕು. ಆಗ ಮಾತ್ರ ಯಕ್ಷಗಾನ ಕಲೆಗೆ ವಿಶೇಷ ಮಾನ್ಯತೆ ಸಾಧ್ಯವಿದೆ. ಯಕ್ಷಗಾನ ಕಲೆಯ ವಿಸ್ತಾರ ಆಗಬೇಕು ಎಂದರು.
ಶಬರ ಸಂಸ್ಥೆಯ ನಾಗರಾಜ್ ಜೋಶಿ ಸೋಂದಾ, ಯಕ್ಷಗಾನ ಕಲೆ ರಾಜ್ಯ ಕಲೆ ಎಂದು ಸರಕಾರ ಘೋಷಿಸಬೇಕು ಎಂದರು. ಹಿರಿಯ ವಿದ್ವಾಂಸ ಜಿ.ಎಲ್.ಹೆಗಡೆ ಕುಮಟಾ, ಯಕ್ಷಗಾನವನ್ನು ಪ್ರೀತಿಸಿ ಬೆಳೆಸುವ ಕಾರ್ಯ ಆಗಬೇಕು ಎಂದರು. ದೇವಸ್ಥಾನದ ಪ್ರಧಾನ ಅರ್ಚಕ ವಿನಾಯಕ ಹೆಗಡೆ ಕಲಗದ್ದೆ, ರಷ್ಮಿ ಹೆಗಡೆ ಇತರರು ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಸ್ವಾಗತಿಸಿದರು. ಟ್ರಸ್ಟಿನ ಸದಸ್ಯ ಗಣಪತಿ ಗುಂಜಗೋಡ ನಿರ್ವಹಿಸಿದರು. ಕಾಶ್ಯಪ ಪರ್ಣಕುಟಿ ವಂದಿಸಿದರು. ಕೋವಿಡ್ ನಿಯಮ ಅನುಸರಿಸಲಾಯಿತು. ಯಕ್ಷಗಾನದ ದಾಖಲೀಕರಣ ಕೂಡ ನಡೆಸಲಾಯಿತು.