ಶಿರಸಿ: ನೂತನ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿರುವವರು ಮೊದಲು ಅರಿಯಬೇಕು.ಅದರಲ್ಲಿರುವ ಉತ್ತಮ ಅಂಶಗಳನ್ನು, ಸ್ಪಷ್ಟತೆಯನ್ನು ಜನತೆಗೆ ಅರ್ಥ ಮಾಡಿಸುವ ಕರ್ತವ್ಯ ನಮ್ಮ ಮುಂದಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ನಗರದ ಅಂಬೇಡ್ಕರ ಭವನದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆ ಮತ್ತು ಗೌರವಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರ ಪುನಃ ಆರಂಭಗೊಂಡಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಕರೋನಾ ಕಾಲದಲ್ಲಿಯೂ ಮಕ್ಕಳನ್ನು ಶೈಕ್ಷಣಿಕ ವಲಯದಲ್ಲಿ ಇರುವಂತೆ ನೋಡಿಕೊಂಡಿದ್ದು, ಶಿಕ್ಷಣ ಇಲಾಖೆಯ ಮತ್ತು ಶಿಕ್ಷಕರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವರ್ಷಪೂರ್ತಿ ಮಕ್ಕಳ ಒಳಿತಿಗಾಗಿ ಸಮಯ ಮೀಸಲಿಡುವ ಶಿಕ್ಷಕರ ಅರ್ಹತೆ, ಸಾಮರ್ಥ್ಯವನ್ನು ಗುರುತಿಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗಿದೆ. ಸ್ವಾರ್ಥದ ಜೀವನದಿಂದ ನಾವೆಲ್ಲರೂ ಹೊರಬಂದಾಗ ಮಾತ್ರ, ಶಿಕ್ಷಣದಲ್ಲಿ ಬದಲಾವಣೆ ಸಾಧ್ಯವೆಂದರು.
ನಮ್ಮ ಮಕ್ಕಳಲ್ಲಿ ರಾಷ್ಟ್ರದ ಕುರಿತಾಗಿ ಆದ್ಯತೆಯನ್ನು ಮೊದಲಾಗಿಸಿದಾಗ ಅವರ ಜೀವನ ಉತ್ತಮವಾಗುತ್ತದೆ. ಶಿಕ್ಷಣದ ಉದ್ದೇಶ ಕೇವಲ ಹಣಗಳಿಕೆಯಷ್ಟೇ ಆಗಬಾರದು. ಜೊತೆಗೆ ಸಾಮಾಜಿಕ ಕೊಡುಗೆ, ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಎಂದರು.
ಶಿಕ್ಷಕ ಬಂಧು ಯೋಜನೆ ಲೋಕಾರ್ಪಣೆಗೊಳಿಸಿದ ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಶಿಕ್ಷಣ ಕ್ಷೇತ್ರ ಬಹಳ ಪವಿತ್ರವಾದುದು. ಗುರು-ಗುರಿ ಇದ್ದವರು ಮಾತ್ರ ಜೀವನದಲ್ಲಿ ಸಾಧನೆಗೈಯ್ಯಲು ಸಾಧ್ಯ ಎಂದರು.
ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿರಸಿ ಜಿಲ್ಲಾ ಕಿರಿಯ, ಹಿರಿಯ ಹಾಗು ಪ್ರೌಢಶಿಕ್ಷಕರನ್ನು ಹಾಗು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಡಿಪಿಐ ದಿವಾಕರ ಶೆಟ್ಟಿ, ತಹಶೀಲ್ದಾರ್ ಎಮ್ ಆರ್ ಕುಲಕರ್ಣಿ, ಬಿಇಒ ಎಮ್ ಎಸ್ ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.