ಯಲ್ಲಾಪುರ: ಕವಿಯಾದವ ಪ್ರಶಸ್ತಿ, ಪುರಸ್ಕಾರಗಳತ್ತ ಗಮನ ಕೊಡದೇ, ಸಮಾಜಕ್ಕೆ ತನ್ನ ಸಾಹಿತ್ಯದಿಂದ ಏನು ಕೊಡುಗೆ ನೀಡಬೇಕೆಂಬ ಚಿಂತನೆ ಹೊಂದಿರಬೇಕು ಎಂದು ಹಿರಿಯ ಸಾಹಿತಿ ಎಂ.ಕೆ.ನಾಯಕ ಮಾಸ್ಕೇರಿ ಹೇಳಿದರು.
ಅವರು ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕವಿ ಸುಬ್ರಾಯ ಬಿದ್ರೆಮನೆ ಅವರ ‘ಬೊಗಸೆ ತುಂಬಾ ಪ್ರೀತಿ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕವಿ ಕಾಲಾತೀತ. ಕವಿಯ ಬದುಕು, ಬರಹದಲ್ಲಿ ಬದ್ಧತೆ ಬೇಕು. ಕವಿತೆ ಸಹಜವಾಗಿ ಮೂಡಿ ಬರಬೇಕು. ಮಾನವೀಯ ಮೌಲ್ಯಗಳನ್ನು ಕವಿ ಎತ್ತಿ ಹಿಡಿಯಬೇಕು. ಪ್ರೀತಿಯಂತಹ ಮಂತ್ರ ಕಾಣೆ, ಸುಖ ಶಾಂತಿಗಿಂತ ಎಂದರು.
ಕೃತಿಕಾರ ಸುಬ್ರಾಯ ಬಿದ್ರೆಮನೆ ಮಾತನಾಡಿ, ಕೃತಿಯಲ್ಲಿ ಸರಳವಾಗಿ ಹನಿಗವನಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಸಾಹಿತಿ ಎಂ.ಕೆ.ನಾಯಕ ಹಾಗೂ ಕೃತಿಕಾರ ಸುಬ್ರಾಯ ಬಿದ್ರೆಮನೆ ಅವರನ್ನು ಕ.ಸಾ.ಪ ವತಿಯಿಂದ ಗೌರವಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಕೃತಿ ಪರಿಚಯಿಸಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ, ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಮಾತನಾಡಿದರು. ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಇತರರಿದ್ದರು. ವೈಟಿಎಸ್ಎಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು. ಶಿಕ್ಷಕ ಸುಧಾಕರ ನಾಯಕ ಪರಿಚಯಿಸಿದರು. ಭಾರತ ಸೇವಾದಳದ ತಾಲೂಕು ಸಂಘಟಕ ಸಂಜೀವಕುಮಾರ ಹೊಸ್ಕೇರಿ ನಿರ್ವಹಿಸಿದರು. ತಾಲೂಕು ಕ.ಸಾ.ಪ ಕಾರ್ಯದರ್ಶಿ ಎಸ್.ಎಲ್.ಜಾಲಿಸತ್ಗಿ ವಂದಿಸಿದರು.