ಶಿರಸಿ: ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಗಳಲ್ಲೊಂದಾದ ಕೆನರಾ ಡಿಸ್ಟ್ರಿಕ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಇದರ ಶತಮಾನೋತ್ಸವ ಸಮಾರಂಭ ಸೆ. 6 ರಂದು ಶಿರಸಿಯಲ್ಲಿನ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಕೊವಿಡ್ ನಿಯಮಾವಳಿಯೊಂದಿಗೆ ನಡೆಯಲಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ನಗರದಲ್ಲಿರುವ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೂರು ವರ್ಷದ ಇತಿಹಾಸವಿರುವ ಈ ಬ್ಯಾಂಕಿನ ಪ್ರಗತಿಯಲ್ಲಿ ಅವ್ ಬಹದ್ದೂರ್ ಪಂಡಿತರ ಆದಿಯಾಗಿ ದಿವಂಗತ ಶ್ರೀಪಾದ ಹೆಗಡೆ ಕಡವೆ, ಅಜ್ಜೀಬಳ ಹೆಗಡೆ, ಎಸ್ ಎಲ್ ಘೋಟ್ನೇಕರ್, ಜಿ ಟಿ ಹೆಗಡೆ ತಟ್ಟೀಸರ ಸೇರಿ ಬ್ಯಾಂಕಿನ ಎಲ್ಲ ಮ್ಯಾನೆಜಿಂಗ್ ಡೈರೆಕ್ಟರ್ ಗಳ ಪಾತ್ರ ಹಿರಿದು. ಅವರ ಶ್ರಮದ ಪ್ರತಿಫಲವಾಗಿ ಬ್ಯಾಂಕ್ ಇಂದು ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಆಗಿದೆ ಎಂದರು.
‘ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕೆಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಒಂದು ಉತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ನಬಾರ್ಡ್ದಿಂದ ಎರಡು ಸಲ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು, ಅಪೆಕ್ ಬ್ಯಾಂಕಿನವರು ಉತ್ತಮ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ನೀಡುವ ಪ್ರಶಸ್ತಿಯನ್ನು 42 ಸಲ ಪಡೆದಿದೆ. ರಿಸರ್ವ್ ಬ್ಯಾಂಕಿನಿಂದ ನಮ್ಮ ರಾಜ್ಯದಲ್ಲಿಯೇ ಲೈಸನ್ಸ್ ಪಡೆದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ನಮ್ಮದಾಗಿದೆ. 1989ರಲ್ಲಿ ಬ್ಯಾಂಕಿಗೆ ಈ ಲೈಸನ್ಸ್ ದೊರೆಯಿತು.ಸಹಕಾರಿ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಕುಟುಂಬಗಳನ್ನು ಸಮಾವೇಶಗೊಳಿಸುವ ಬಗ್ಗೆ ಬ್ಯಾಂಕು ಮಾಡಿದ ಪ್ರಯತ್ನಗಳು ಉತ್ತಮ ಪರಿಣಾಮ ನೀಡಿದೆ. ಜಿಲ್ಲೆಯ ಒಟ್ಟು ಕುಟುಂಬಗಳ ಶೇಕಡಾ 98ರಷ್ಟು ಕುಟುಂಬಗಳು ಸಹಕಾರಿ ಕ್ಷೇತ್ರದಲ್ಲಿ ಸಮಾವೇಶವಾಗಿವೆ ಎಂದರು.
ಬ್ಯಾಂಕಿಗೆ ತನ್ನದೇ ಆದ ಇತಿ-ಮಿದೆ. ಕೆಡಿಸಿಸಿ ಸಹಕಾರಿ ಸಂಸ್ಥೆ, ಶೇರುದಾರರು ಸೇರಿ ನಡೆಸುತ್ತಿರುವುದು. ಬ್ಯಾಂಕು ನಡೆದು ಬಂದ ದಾರಿ, ಬ್ಯಾಂಕಿನ ಉಪಯೋಗ. ನಿಷ್ಟಾವಂತ ನಿರುದ್ಯೋಗಿಗಳಿಗೆ ಉದ್ಯೋಗ, ಕೃಷಿ ಕ್ಷೇತ್ರಕ್ಕೆ ಸಾಲ, ಕೃಷಿ ಕ್ಷೇತ್ರದ ಸಾಲದ ಪ್ರಮಾಣ ಹೆಚ್ಚಳ, ಬ್ಯಾಂಕಿನ-ಕೃಷಿಕರ ಮತ್ತು ಠೇವಣಿದಾರರ ವಿಶ್ವಾಸ ಈ ಮೂರನ್ನು ಬ್ಯಾಂಕ್ ಉಳಿಸಿಕೊಂಡಿದೆ.
ಮೊಟ್ಟ ಮೊದಲ ಬಾರಿಗೆ ವಾಹನ ಸಾಲಕ್ಕೆ 8.5% ಬಡ್ಡಿದರವಿದ್ದು, ಎಲ್ಲ ಬಡ್ಡಿ ದರವನ್ನು 12%ಕ್ಕಿಂತ ಹೆಚ್ಚಿಗೆ ಮಾಡಿಲ್ಲ. 14%ರಿಂದ 16%ರವರೆಗೆ ಇದ್ದ ಎಲ್ಲ ಬಡ್ಡಿ ದರವನ್ನು 12%ರವೆರೆಗ ಇಳಿಕೆ ಮಾಡಿದ್ದೇವೆ. ಹಾಗಂತ ಠೇವಣಿದಾರರಿಗೆ ನೀಡುವ ಬಡ್ಡಿ ಇಳಿಸಿಲ್ಲ ಅದೇ ಮುಂದುವರಿಯುತ್ತಿದೆ. ಗ್ರಾಹಕ ವಿಶ್ವಾಸ ಮತ್ತು ಠೇವಣಿದಾರರ ವಿಶ್ವಾಸ ಇಟ್ಟುಕೊಂಡು ಮುನ್ನಡೆಯುತ್ತಿದೆ. ಬ್ಯಾಂಕ್ ಉನ್ನತ ಸ್ಥಿತಿಯಲ್ಲಿ ಮುಂದುವರಿಯಲು ಇವರಿಬ್ಬರು ಮುಖ್ಯ ಕಾರಣೀಕರ್ತರಾಗಿದ್ದಾರೆ.
ಸ್ಪರ್ಧಾತ್ಮಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರಿಗೆ ತಂತ್ರಜ್ಞಾನಾಧಾರಿತ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ ನಬಾರ್ಡ್ ಮಾರ್ಗದರ್ಶನದಂತೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿದೆ. ತ್ವರಿತ ಬ್ಯಾಂಕಿಂಗ್ ಸೇವೆಯ ವಿವಿಧ ಸೌಲಭ್ಯಗಳಾದ ಎ.ಟಿ.ಎಂ.(RTGS/NEFT, e-commerce, IMPS)ಸೇವೆಯೊಂದಿಗೆ ಸುಸಜ್ಜಿತ ಸಂಚಾರಿ ಎ.ಟಿ.ಎಂ. ಸಹ ಬ್ಯಾಂಕು ಗ್ರಾಹಕರಿಗೆ ಪರಿಚಯಿಸಿರುತ್ತದೆ.
ಈ ಬ್ಯಾಂಕಿನ 100 ವರ್ಷಗಳ ಇತಿಹಾಸದ ಅವಧಿಯಲ್ಲಿ ಒಟ್ಟೂ 10 ಅಧ್ಯಕ್ಷರು, 17 ಉಪಾಧ್ಯಕ್ಷರಾಗಿದ್ದು, ಎಲ್ಲರೂ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬ್ಯಾಂಕು ಪ್ರಾರಂಭವಾದಾಗ ಒಬ್ಬ ಕಾರ್ಯದರ್ಶಿ, ಅರ್ಧ ಅವಧಿಯ ಒಬ್ಬ ಸಿಪಾಯಿ ಇದ್ದರು. ಈಗ ಸಿಬ್ಬಂದಿಗಳ ಸಂಖ್ಯೆ 389 ಕ್ಕೆ ತಲುಪಿದೆ. ಬ್ಯಾಂಕು ಪ್ರಧಾನ ಕಛೇರಿಗೆ ಮತ್ತು 20 ಶಾಖೆಗಳಿಗೆ ಸ್ವಂತ ಕಟ್ಟಡವನ್ನು ಹೊಂದಿದೆ. ಒಂದು ಮಹಿಳಾ ಶಾಖೆಯನ್ನು ಸಹ ಹೊಂದಿದೆ.
ಬ್ಯಾಂಕು ಎಲ್ಲ ವಿಧದ ಸಹಕಾರಿ ಸಂಘಗಳಿಗೆ ಹಾಗೂ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲ ವಿಧದ ಸಾಲಗಳನ್ನು ಪೂರೈಸುತ್ತಲಿದೆ. ಸರಕಾರವು ಕಾಲ ಕಾಲಕ್ಕೆ ಜಾರಿಯಲ್ಲಿ ತಂದ ಎಲ್ಲ ಆರ್ಥಿಕ ಯೋಜನೆಗಳನ್ನು ಬ್ಯಾಂಕು ಸಮರ್ಥವಾಗಿ ಅನುಷ್ಠಾನದಲ್ಲಿ ತಂದಿದೆ. ರಾಜ್ಯದಲ್ಲಿ ಸಹಕಾರಿ ಸಂಘಗಳ ವ್ಯವಹಾರ ಅಭಿವೃದ್ಧಿ ಯೋಜನೆ ಪ್ರಾರಂಭವಾಗಲು ಮತ್ತು ವಿಸ್ತಾರವಾಗಲು ಈ ಬ್ಯಾಂಕಿನ ಕೊಡುಗೆ ಅನನ್ಯವಾಗಿದೆ. ಬ್ಯಾಂಕು ಸಹಕಾರಿ ಸಂಘಗಳ ಮೂಲಕ ರೈತರಿಗೆ ವಿವಿಧ ಬೆಳೆಗಳಿಗೆ ಬೆಳೆ ಸಾಲ ಮತ್ತು ವಿವಿಧ ಉದ್ದೇಶಗಳಿಗೆ ಎತ್ತು ಖರೀದಿ, ಗಾಡಿ ಖರೀದಿ, ಜಮೀನು ಸುಧಾರಣೆ, ಜಮೀನು – ಖರೀದಿ, ನೀರಾವರಿ ಕಾಲುವೆ, ಕೊಟ್ಟಿಗೆ ಮನೆ, ಬಾವಿ ದುರಸ್ತಿ, ತಂತಿ ಬೇಲಿ, ಪವರ್ ಟಿಲ್ಲರ್, ಟ್ರ್ಯಾಕ್ಟರ್, ಹೈನು ವ್ಯವಸಾಯ, ಕೋಳಿ ಸಾಕಣೆ, ಜೇನು ವ್ಯವಸಾಯ, ಪಂಪ್ಸೆಟ್, ಅನಿಲ ಸ್ಥಾವರ, ರೇಷ್ಮೆ ವ್ಯವಸಾಯ, ಬಾಳೆ, ಅನಾನಸ್ಸು, ಹನಿ ನೀರಾವರಿ, ತುಂತುರು ನೀರಾವರಿ, ಸೋಲಾರ್ ಯುನಿಟ್ ಮುಂತಾದ ಉದ್ದೇಶಗಳಿಗೆ ಮಾಧ್ಯಮಿಕ ಸಾಲವನ್ನು ನೀಡುತ್ತಲಿದೆ.
ಕೃಷಿ ಪತ್ತಿನ ಸಂಘಗಳು, ಗ್ರಾಹಕರ ಸಂಘಗಳು, ಮಾರಾಟ ಸಹಕಾರಿ ಸಂಘಗಳು, ಇತರ ಕೃಷಿಯೇತರ ಸಹಕಾರಿ ಸಂಘಗಳು ಕೈಗೊಳ್ಳುವ ಯಾವತ್ತೂ ವ್ಯವಹಾರಗಳಿಗೆ ಬ್ಯಾಂಕ್ ಸಾಲ ಒದಗಿಸುತ್ತಲಿದೆ. ಬ್ಯಾಂಕು ವ್ಯಕ್ತಿಗಳಿಗೆ ನೇರವಾಗಿ ಬಂಗಾರದ ದಾಗೀನು ಭದ್ರತಾ ಸಾಲ, ಓವರ್ ಡ್ರಾಫ್ ಸಾಲ, ದೀರ್ಘ ಬಾಳಿಕೆ ವಸ್ತು ಖರೀದಿ ಬಗ್ಗೆ ಸಾಲ, ಹೌಸಿಂಗ್ ಸಾಲ, ವಾಹನ ಸಾಲ, ಔದ್ಯೋಗಿಕ ಉದ್ದೇಶಗಳಿಗೆ ಸಾಲ, ಟರ್ಸರಿ ಸೆಕ್ಟರ್ ಸಾಲ, ನೌಕರದಾರರಿಗೆ ಅಲ್ಪಾವಧಿ ಸಾಲ ನೀಡುತ್ತಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ತೀವ್ರ ಪೈಪೋಟಿ ಇದೆ. ಆದರೆ ಈ ಸ್ಪರ್ಧೆಯ ಮಧ್ಯದಲ್ಲಿ ಈ ಬ್ಯಾಂಕಿನ ಸ್ಥಾನಮಾನವಾಗಲೀ, ಅದರ ಕಾರ್ಯಕ್ರಮಗಳಾಗಲೀ ಕುಗ್ಗಿಲ್ಲ. ಜಿಲ್ಲೆಯಲ್ಲಿ ಮುಂಬರುವ ವರ್ಷಗಳಲ್ಲಿ ಸಹಕಾರಿ ಆಂದೋಲನ ತನ್ನ ಪರಿಪೂರ್ಣ ಉನ್ನತಿಯನ್ನು ಸಾಧಿಸುವಂತಾಗಲು ಬ್ಯಾಂಕು ಪ್ರಯತ್ನವನ್ನು ಮುಂದುವರೆಸುತ್ತಲಿದೆ. ಆದರ್ಶವಾದ ಸಹಕಾರಿ ಸಂಘಟಣೆ, ದಕ್ಷ ಆಡಳಿತ, ಸೇವಾಕಾಂಕ್ಷಿಗಳಾದ ಕರ್ತವ್ಯನಿರತ ಸಿಬ್ಬಂದಿ ವರ್ಗ, ಅಭಿಮಾನಿ ಗ್ರಾಹಕರು, ಭದ್ರ ಆರ್ಥಿಕ ತಳಹದಿ, ಎಲ್ಲರಿಗೂ ಅನುಕೂಲಕರವಾದ ವಿವಿಧ ರೀತಿಯ ಠೇವಣಿಗಳು ಹಾಗೂ ಸಾಲದ ಯೋಜನೆಗಳು, ಶ್ಲಾಘನೀಯ ಸಾರ್ವಜನಿಕ ಸಂಪರ್ಕ, ಸಾಲ ವಸೂಲಿಯಲ್ಲಿಯ ಪರಿಣಾಮಕಾರಿ ಕ್ರಮ, ಸಾಮಾಜಿಕ ಕಳಕಳಿ, ವಿಚಾರ ವಿನಿಮಯ, ಅಧ್ಯಯನ, ದುರ್ಬಲ ವರ್ಗದವರಿಗೆ ನೆರವು ನೀಡುವಲ್ಲಿ ಪ್ರಾಶಸ್ತ್ರ, ಮುಂಧೋರಣೆ, ಸಮಸ್ಯೆಗಳನ್ನು ಪರಿಹರಿಸುವಲ್ಲಿಯ ಸಕಾಲಿಕ ಕ್ರಮ ನವೀನ ಯೋಜನೆಗಳ ಅನುಷ್ಠಾನ, ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಬೇಕೆಂಬ ಛಲ ಈ ಎಲ್ಲ ಗುಣಗಳಿಂದಾಗಿ ಬ್ಯಾಂಕು ಈ 100 ವರ್ಷಗಳ ಅವಧಿಯಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿ ಮುನ್ನಡೆಯುತ್ತಿದೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರುಗಳಾದ ಸುರೇಶ್ಚಂದ್ರ ಕೆಶಿನ್ಮನೆ, ರಾಮಕೃಷ್ಣ ಹೆಗಡೆ ಕಡವೆ, ಜಿ ಆರ್ ಹೆಗಡೆ ಸೋಂದಾ, ಆರ್ ಎಮ್ ಹೆಗಡೆ ಬಾಳೇಸರ, ಪ್ರಕಾಶ ಗುನಗಿ, ಬಾಬು ಸುಂಕೇರಿ, ಮ್ಯಾನೆಜಿಂಗ್ ಡೈರೆಕ್ಟರ್ ಆರ್ ಜಿ ಭಾಗ್ವತ್ ಸೇರಿದಂತೆ ಇನ್ನಿತರರು ಇದ್ದರು.