ಶಿರಸಿ: ಸದಸ್ಯರ ಅಗತ್ಯತೆಗಳನ್ನು ಕಾಲಕಾಲಕ್ಕೆ ಪೂರೈಸುವುದರ ಮೂಲಕ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಶಕ್ತಿ ತುಂಬುವ ಕಾರ್ಯ ಎಲ್ಲರಿಂದಾಗಬೇಕೆಂದು ಹಿರಿಯ ಸಹಕಾರಿ ಜಿ.ಎಮ್ ಹೆಗಡೆ, ಹುಳಗೋಳ ಆಶಿಸಿದರು.
ಶಿರಸಿಯ ಟಿ.ಎಮ್.ಎಸ್ ಸಭಾಂಗಣದಲ್ಲಿ ಈಚೆಗೆ ನಡೆದ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿಯ 33ನೇ ವಾರ್ಷಿಕ ಸರ್ವಸಾಧಾರಣಾ ಸಭೆಯನ್ನುದ್ಧೇಶಿಸಿ ಮಾತನಾಡಿ, ರಾಜ್ಯಕ್ಕೆ ಮಾದರಿಯೆಂಬಂತೆ ಸಹಕಾರಿ ಕ್ಷೇತ್ರದ ಮೂಲಕ ಜಿಲ್ಲೆಯ ಜನಸಾಮಾನ್ಯರ ಆಶೋತ್ತರಗಳು, ಅಗತ್ಯತೆಗಳನ್ನು ಪೂರೈಸುವ ಕಾರ್ಯವನ್ನು ಸಹಕಾರಿ ಸಂಘ, ಸಂಸ್ಥೆಗಳು ಮಾಡುತ್ತ ಬಂದಿವೆ. ಅದರಂತೆಯೇ ಸದಸ್ಯರೂ ಕೂಡ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಸಹಕಾರಿ ರಂಗದ ಆಶೋತ್ತರಗಳನ್ನು ಹೊಂದಿ 1988ರಲ್ಲಿ ಸ್ಥಾಪನೆಗೊಂಡ ಚೇತನಾ ಸಹಕಾರಿ ಮುದ್ರಣಾಲಯ ಆರಂಭದಲ್ಲಿ ತೀರ ಕಷ್ಟದ ದಿನಗಳನ್ನು ಕಳೆದಿದೆ. ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಹೊಂದಿದ್ದಲ್ಲದೇ, ನಷ್ಟದ ಸುಳಿಯಲ್ಲಿ ಸಂಸ್ಥೆ ಸಿಲುಕಿತ್ತು. ಸ್ವಂತ ಕಟ್ಟಡವಿಲ್ಲದೆ ಮುದ್ರಣ ಯಂತ್ರಗಳನ್ನು ಹೊತ್ತುಕೊಂಡು ಪದೇ ಪದೇ ಸಂಸ್ಥೆಯ ಸ್ಥಳವನ್ನು ಬದಲಾಯಿಸಿದ್ದೇವೆ. ಇದೀಗ ಸಂಸ್ಥೆಗೆ ಸ್ವಂತ ಕಟ್ಟಡ ಹೊಂದುವ ಪ್ರಯತ್ನದಲ್ಲಿದ್ದು ಸಹಕಾರಿ ಅಭಿಮಾನಿಗಳು ಸಹಕರಿಸಬೇಕು ಎಂದರು.
ಚೇತನಾ ಸಹಕಾರಿ ಮುದ್ರಣಾಲಯವು ಪ್ರಿಂಟಿಂಗ್ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿಶೇಷವಾದ ಸಂಸ್ಥೆಯೆಂದು ಗುರುತಿಸಿಕೊಂಡಿದೆ. ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, ಸೌಹಾರ್ಧ ಬ್ಯಾಂಕುಗಳು, ತಾಲೂಕಾ ಹುಟ್ಟುವಳಿಗಳ ಮಾರಾಟ ಸಂಘಗಳು, ಬ್ಯಾಂಕ್ಗಳು ಈ ಸಂಸ್ಥೆಗೆ ಪೂರಕ ಆಹಾರವಾಗಿದೆ. ಸಂಘ-ಸಂಸ್ಥೆಗಳ, ಜನಸಾಮಾನ್ಯರ ಮುದ್ರಣ ಅಗತ್ಯತೆಗಳನ್ನು ಸರಿಯಾದ ವೇಳೆಗೆ, ಸ್ಪಷ್ಟವಾಗಿ ಒದಗಿಸುತ್ತ ಲಾಭದ ಹಾದಿಯಲ್ಲಿ ಸಂಸ್ಥೆ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಹಿರಿಯ ಸಹಕಾರಿ ಜಿ.ಟಿ. ಹೆಗಡೆ, ತಟ್ಟೀಸರ ಮಾತನಾಡಿ, ಚೇತನಾ ಸಹಕಾರಿ ಮುದ್ರಣಾಲಯವು ಕಾಲಕಾಲಕ್ಕೆ ನೂತನ ಯಂತ್ರೋಪಕರಣಗಳನ್ನು ಅಳವಡಿಸುತ್ತ ಉತ್ತಮ ಮುದ್ರಣ ಸಂಸ್ಥೆ ಎಂಬ ಖ್ಯಾತಿಯನ್ನು ಹೊಂದಿದೆ. ಇನ್ನೂ ಹೆಚ್ಚಿನ ಯಂತ್ರೋಪಕರಣಗಳ ಅಳವಡಿಕೆಯತ್ತ ಸಂಸ್ಥೆ ಗಮನಹರಿಸಿದೆ. ಸಂಸ್ಥೆಯ ಏಳ್ಗೆಗೆ ಅಗತ್ಯವಿರುವ ಸಲಹೆ, ಸೂಚನೆಗಳನ್ನು ಸದಸ್ಯರು ನೀಡುವುದರ ಜೊತೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.
ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಪ್ರಸಾದ ಹೆಗಡೆ ಕಡಬಾಳ ವರದಿ ವಾಚಿಸಿ, 2020-21ನೇ ಸಾಲಿನಲ್ಲಿ ಒಟ್ಟೂ 35.45 ಲಕ್ಷ ರು.ಗಳ ಮುದ್ರಣ ಕಾರ್ಯಗಳನ್ನು ನಿರ್ವಹಿಸಿ, ಒಟ್ಟೂ 108.93 ಲಕ್ಷ ಒಟ್ಟೂ ನಿಧಿಗಳನ್ನು ಸಂಸ್ಥೆ ಹೊಂದಿದೆ. 2.27 ಲಕ್ಷ ರೂ.ಗಳ ಶೇರು ಬಂಡವಾಳ, 50.69 ಲಕ್ಷ ಗುಂತಾವಣೆಯನ್ನು ಹೊಂದುವ ಮೂಲಕ 4 ಲಕ್ಷ ರು ನಿವ್ವಳ ಲಾಭಗಳಿಸಿದೆ ಎಂದರು.
ಈ ವೇಳೆ ಸಂಘದ ಸದಸ್ಯರಾದ ಆರ್.ಎಮ್ ಹೆಗಡೆ ಹಾಲ್ಕಣಿ ಇವರು ಸಂಘದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಎಸ್. ಪಿ. ಶೆಟ್ಟಿ ಶಿರಸಿ, ಎನ್. ಆರ್. ಹೆಗಡೆ ಬುಗುಡಿಮನೆ, ಪರಮೇಶ್ವರ ಹೆಗಡೆ ಕಾಗೇರಿ, ವಿಶ್ವನಾಥ ಹೆಗಡೆ ಕಲ್ಗದ್ದೆ, ಆರ್. ಎಸ್. ಭಟ್ಟ ನಿಡಗೋಡ, ಟಿ. ಎಮ್. ಸುಬ್ಬರಾಯ, ಲಲಿತಾ ಹೆಗಡೆ, ಹಂಚಿನಕೇರೆ, ಜಟ್ಟಪ್ಪ ಮೊಗೇರ, ಸಿದ್ದಾಪುರ, ಸಂಸ್ಥೆಯ ಸಲಹೆಗಾರರಾದ ಪಿ.ವಿ ಹೆಗಡೆ, ಕಂಪ್ಲಿ ಇನ್ನಿತರರು ಉಪಸ್ಥಿತರಿದ್ದರು.