ಯಲ್ಲಾಪುರ: ಸುಜ್ಞಾನ ನೆಟ್ವರ್ಕ ಅವರ ಇ ಯಲ್ಲಾಪುರ ಡಾಟ್ ಕಾಮ್ ಡಿಜಿಟಲ್ ಮೀಡಿಯಾ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ’ಮುದ್ದು ಕೃಷ್ಣ ವೇಷ ಫೋಟೋ ಸ್ಪರ್ಧೆ-2021’ ಫಲಿತಾಂಶವನ್ನು ಸೋಮವಾರ ಸಂಜೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.
ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ಗಣ್ಯರು ಸ್ಪರ್ಧಾ ವಿಜೇತರ ಹೆಸರುಗಳನ್ನು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಖ್ಯಾತ ಮದ್ದಳೆ ವಾದಕ, ಯಕ್ಷಗುರು ಗಣಪತಿ ಭಾಗ್ವತ್ ಕವಾಳೆ, ಕೇಂದ್ರ ಸರಕಾರದ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತ ಭಾಗವತ ಅನಂತ ಹೆಗಡೆ ದಂತಳಿಗೆ, ಅಣಲಗಾರ್ ಗೋಪಾಲಕೃಷ್ಣ ದೇವಾಲಯದ ಮೊಕ್ತೇಸರ ಗೋಪಾಲಕೃಷ್ಣ ಭಟ್ಟ ವೈದಿಕರಮನೆ, ಮೃದಂಗ ವಾದಕ ನರಸಿಂಹ ಭಟ್ಟ ಹಂಡ್ರಮನೆ, ಚಂಡೆ ವಾದಕ ಪ್ರಮೋದ ಕಬ್ಬಿನಗದ್ದೆ, ವಿಜಯವಾಣಿ ವರದಿಗಾರ ಶ್ರೀಧರ ಅಣಲಗಾರ್, ಶ್ರೀರಾಮಲಿಂಗೇಶ್ವರ ಕಲಾಕೂಟದ ಅಧ್ಯಕ್ಷ ಎನ್.ಎಸ್.ಭಟ್ಟ ನಂದೊಳ್ಳಿ ಹಾಗೂ ಸುಜ್ಞಾನ ನೆಟ್ವರ್ಕ್ ಮುಖ್ಯಸ್ಥ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಉಪಸ್ಥಿತರಿದ್ದರು.
ಉತ್ತಮ ಸ್ಪಂದನೆ: ‘ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ -2021’ ಸ್ಫರ್ಧೆಗೆ ಉತ್ತರಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಮುದ್ದು ಕೃಷ್ಣ ವೇಷದ ಫೋಟೋಗಳನ್ನು ಕಳಿಸಲಾಗಿತ್ತು. ಇವುಗಳಲ್ಲಿ ಮೂರು ಫೋಟೋಗಳನ್ನು ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ನಿರ್ಣಾಯಕರು ಆಯ್ಕೆ ಮಾಡಿದ್ದಾರೆ. ಮತ್ತು 10 ಫೋಟೋಗಳಿಗೆ ಸಮಾಧಾನಕರ ಬಹುಮಾನಗಳನ್ನು ಪ್ರಕಟಿಸಲಾಗಿದೆ. ಈ ಸ್ಪರ್ಧೆಯ ನಿರ್ಣಾಯಕರಾಗಿ ವಿಶ್ರಾಂತ ಪ್ರಾಂಶುಪಾಲರು, ಬರಹಗಾರರೂ ಆದ ಬೀರಣ್ಣಾ ನಾಯಕ ಮೊಗಟಾ, ಖ್ಯಾತ ನೇತ್ರ ತಜ್ಞೆ ಡಾ. ಸೌಮ್ಯ ಕೆ.ವಿ. ಹಾಗೂ ವಿಶ್ರಾಂತ ಪ್ರಾಂಶುಪಾಲ ಜಯರಾಮ ಗುನಗಾ ಪಾಲ್ಗೊಂಡಿದ್ದರು.
ಸೆ.4ಕ್ಕೆ ಬಹುಮಾನ ವಿತರಣೆ: ಸ್ಪರ್ಧಾ ವಿಜೇತರಿಗೆ ಹಾಗೂ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದವರಿಗೆ ಸೆ.4ರಂದು ಯಲ್ಲಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಈ ಸ್ಪರ್ಧೆಯ ಸಹಪ್ರಾಯೋಜಕರಾದ ಖ್ಯಾತ ಆಭರಣ ಮಳಿಗೆ ಗೌತಮ್ ಜ್ಯುವೆಲ್ಲರ್ಸ್ ಮಾಲಕರಾದ ಪ್ರಕಾಶ ಎಂ. ಶೇಟ್, ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.