ಮುಂಡಗೋಡ: ಶಿಕ್ಷಕರಿಗೆ ಮತ್ತು ಹೊರಟ್ಟಿಯವರಿಗೆ ಅವಿನಾಭಾವ ಸಂಬಂಧವಿದೆ. 12ನೇ ಶತಮಾನದ ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡು ಬೆಳೆದವರು. ಇನ್ನೊಂದು ಬಾರಿ ಗೆದ್ದರೆ ಗಿನ್ನೀಸ್ ದಾಖಲೆಗೆ ಸೇರುತ್ತದೆ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.
ಅವರು ಪ.ಪಂ. ಸಭಾಭವನದಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘಗಳ ತಾಲೂಕು ಘಟಕ ಮತ್ತು ಇತರ ಶೈಕ್ಷಣಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಆಶೀರ್ವಚನ ನೀಡಿದರು. ಶಿಕ್ಷಣ ರಂಗ ಮತ್ತು ಕೃಷಿ ರಂಗ ಅತ್ಯಂತ ಪವಿತ್ರವಾದವು ಭವ್ಯ ಭಾರತ ಸೃಷ್ಟಿ ಮಾಡುವ ಶಕ್ತಿ ಇವೆರಡಕ್ಕೂ ಇದೆ ಆದರೆ ಇತ್ತೀಚೆಗೆ ಶಿಕ್ಷಣದ ಪಾನಕದಲ್ಲಿ ಸಿಹಿ ಕಡಿಮೆಯಾಗುತ್ತಿದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಮೊದಲಿನಂತೆ ಗುರುಕುಲ ಶಿಕ್ಷಣ ಪದ್ಧತಿ ಇಲ್ಲ. ಕೇವಲ ಸರ್ಟಿಫಿಕೇಟ್ ಸಲುವಾಗಿ ಕಲಿಯುತ್ತಾರೆ. ಶಿಕ್ಷಣ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಯಾಗಬೇಕು. ಸರ್ಕಾರ ಬದಲಾದಂತೆ ನೀತಿಗಳು ಬದಲಾಗುತ್ತವೆ. ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನವಿರಬೇಕು. ಶಿಕ್ಷಕರು ಜವಾಬ್ದಾರಿಯಿಂದ ಶ್ರಮಪಟ್ಟು ಶಿಕ್ಷಣ ನೀಡಿದರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಇಲ್ಲದೆ ಹೋದರೆ ಮುಂಬರುವ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದರು.
ನಾರಾಯಣ ದೈಮನೆ, ಜಿ.ಆರ್.ಭಟ್ಟ, ಪ್ರಕಾಶ ನಾಯ್ಕ, ದಿವಾಕರ ಶೆಟ್ಟಿ ಎಚ್., ತಹಸೀಲ್ದಾರ್ ಶ್ರೀಧರ
ಮುಂದಲಮನಿ, ಬಿಇಒ ವಿ.ವಿ.ನಡುವಿನಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ, ನಿವೃತ್ತ ಶಿಕ್ಷಕರನ್ನು, ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆ ಮಾಡಿದ ತಾಲೂಕಿನ ರಕ್ಷಿತಾ ಬೆಂಡಲಗಟ್ಟಿ, ಸಹನಾ ಶಿಂಧೆ, ದೀಕ್ಷಾ ನಾಯ್ಕ, ಕಿಕ್ ಬಾಕ್ಸಿಂಗ್ನಲ್ಲಿ ಸಾಧನೆ ಮಾಡಿದ ಅಂಬರೀಶ ಭಜಂತ್ರಿ, ಡಿಡಿಪಿಐ ದಿವಾಕರ ಶೆಟ್ಟಿ ಮತ್ತು ಬಿಇಒ ವಿ.ವಿ.ನಡುವಿನಮನಿ ಅವರಿಗೆ ಸನ್ಮಾನಿಸಲಾಯಿತು.
ರಮೇಶ ಅಂಬಿಗೇರ, ಫಾ.ಜಾನ್ಸನ್ ಪಿಂಟೋ, ರಾಜು ದಳಪತಿ, ದೀಪಕ ಲೋಕಣ್ಣವರ, ಕೆ.ಟಿ.ಶೆಟ್ಟರ, ತಾಲೂಕಿನ ಶಿಕ್ಷಕರು ಇದ್ದರು. ಸುರೇಶ ಹುದ್ಲೂರ ಪ್ರಾರ್ಥಿಸಿದರು. ನಾಗವೇಣಿ ರಾಣಿಗೇರ ಮತ್ತು ಸಂಗಡಿಗರು ನಾಡಗೀತೆ ಹೇಳಿದರು. ಎಸ್.ಡಿ.ಮುಡೆಣ್ಣವರ ಸ್ವಾಗತಿಸಿದರು. ಶಹಜಹಾನ್ ದೊಡ್ಡಮನಿ ಪರಿಚಯಿಸಿದರು. ಸುರೇಶ ಪೂಜಾರ ನಿರೂಪಿಸಿದರು.