ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲೂಕು ಒಂದೊಂದು ಕೃಷಿ ಉತ್ಪನ್ನಕ್ಕೆ ಪ್ರಸಿದ್ಧಿ ಪಡೆದಿದೆ. ಸ್ಥಳೀಯ ಸಂಸ್ಥೆಗಳು ಈ ಉತ್ಪನ್ನಕ್ಕೆ ಜಿ ಐ ಟ್ಯಾಗ್ ಕೊಡಿಸಲು ಯತ್ನಿಸಬೇಕಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶಿರಸಿ ಅಡಕೆಗೆ ಜಿ ಐ ಟ್ಯಾಗ್ ಸಿಕ್ಕ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಹೊರ ತಂದಿರುವ ಲಕೋಟೆಯನ್ನು ನಗರದ ಪೂಗ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಂಕೋಲಾ ಕರಿ ಇಸಾಡು, ಕುಮಟಾದ ಈರುಳ್ಳಿ, ಗೋಕರ್ಣದ ಮೆಣಸು, ಹೊನ್ನಾವರದ ವೀಳ್ಯದ ಎಲೆ, ಭಟ್ಕಳದ ಮಲ್ಲಿಗೆ, ಜೊಯಿಡಾದ ಗೆಣಸು ಜಿ ಟ್ಯಾಗ್ ಗೆ ಅರ್ಹತೆ ಹೊಂದಿವೆ. ಅದಕ್ಕೆ ಬೇಕಾದ ದಾಖಲೀಕರಣ ಆಗಬೇಕಿದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಪ್ರಯತ್ನ ಮಾಡಬೇಕಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ದಿನದಲ್ಲೂ ಅಂಚೆ ಇಲಾಖೆ ತನ್ನ ಪ್ರಭಾವ ಉಳಿಸಿಕೊಂಡಿದೆ. ಹೊಸದನ್ನು ಮಾಡುವ ಮೂಲಕ ಜನರ ಮಧ್ಯೆ ನಾವು ಇರುತ್ತೇವೆ ಎಂಬ ಚಟುವಟಿಕೆ ಅಂಚೆ ಇಲಾಖೆಯಿಂದಲೂ ಆಗಬೇಕು. ಟಿಎಸ್ಎಸ್ ಈಗ 100 ವರ್ಷಗಳ ಹೊಸ್ತಿಲಿನಲ್ಲಿದ್ದು, ಪ್ರಬುದ್ಧ ಸಂಸ್ಥೆಯಾಗಿ ಬೆಳೆದಿದೆ ಎಂದು ವಿಶ್ವೇಶ್ವರ ಹೆಗಡೆ ಹೇಳಿದರು.
ಜಿ ಐ ಟ್ಯಾಗ್ ಲಕೋಟೆ ಭವಿಷ್ಯದಲ್ಲಿ ಜಗತ್ತಿನಾದ್ಯಂತ ತಲುಪಲಿದೆ. ಪ್ರಧಾನಿ ಕಾರ್ಯಾಲಯ ಜಿ ಐ ಟ್ಯಾಗ್ ಕವರ್ ಬಳಕೆ ಮಾಡುತ್ತದೆ. ಜಿ ಟ್ಯಾಗ್ ಪಡೆದ ಬೇರೆ ಬೇರೆ ವಸ್ತುಗಳ ಕವರ್ ಎಲ್ಲೆಡೆ ಮಂಗಳವಾರ ಬಿಡುಗಡೆ ಆಗುತ್ತಿದೆ. ಆದರೆ, ಅಡಕೆ ಕುರಿತ ಕವರ್ ಸೋಮವಾರವೇ ಬಿಡುಗಡೆ ಆಗಿದ್ದು ಸಂತಸ ಎಂದರು.
ಶಿರಸಿ ಅಡಕೆಗೆ ಜಿ ಐ ಟ್ಯಾಗ್ ಕೊಡಿಸುವಲ್ಲಿ ಪ್ರಮುಖವಾಗಿ ಯತ್ನಿಸಿದ ನಗರದ ಟಿಎಸ್ಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ ಮಾತನಾಡಿ, ಟಿಎಸ್ ಎಸ್ ಸಂಸ್ಥೆ ಅಡಕೆಯನ್ನು 40 ವಿಧದಲ್ಲಿ ವಿಂಗಡಿಸಿ ಬೇರೆ ಬೇರೆ ರಾಜ್ಯಗಳಿಗೆ, ಬೇರೆ ಬೇರೆ ಬಳಕೆಗೆ ಪೂರೈಕೆ ಮಾಡುತ್ತಿದೆ. ಅಡಕೆಗೆ ಜಿ ಐ ಟ್ಯಾಗ್ ಕುರಿತು ಯತ್ನಿಸಲು ನಬಾರ್ಡ್ ನಮಗೆ ಸೂಚನೆ ನೀಡಿತ್ತು. ನಾವು ಅಡಕೆಯ ಬಗ್ಗೆ ಸಂಶೋಧನೆ ನಡೆಸಿ 2013 ರಲ್ಲಿ ಜಿ ಐ ಟ್ಯಾಗ್ ಗೆ ಅಪ್ಲೈ ಮಾಡಿದ್ದೆವು. 2019 ರಲ್ಲಿ ಜಿ ಐ ಟ್ಯಾಗ್ ಲಭಿಸಿದೆ. ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರದಲ್ಲಿ ಬೆಳೆಯುವ ಅಡಿಕೆ ವಿಭಿನ್ನವಾಗಿದೆ. ರಾಶಿ ಮತ್ತು ಚಾಲಿ ಅಡಕೆಯನ್ನು ಸಮ ಪ್ರಮಾಣದಲ್ಲಿ ಜಿಲ್ಲೆಯ ಮಲೆನಾಡಿನಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿಯ ಅಡಕೆ ಚಪ್ಪಟೆ ಆಗಿದ್ದು, ನೀರಿನಲ್ಲಿ ಹಾಕಿಟ್ಟರೆ ಹಿಗ್ಗುತ್ತದೆ. ಇದರಿಂದ ಶಿರಸಿ ಅಡಕೆಯನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ ಮಾರಬಹುದಾಗಿದೆ ಎಂದರು.
2.04 ಲಕ್ಷ ಕ್ವಿಂಟಾಲ್, 600 ಕೋಟಿ ಮೌಲ್ಯದ ಅಡಕೆಯನ್ನು ಇದುವರೆಗೆ ಜಿ ಐ ಟ್ಯಾಗ್ ನಲ್ಲಿ ಮಾರಾಟ ಮಾಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅಡಕೆ ದರ ಏರಿಕೆ ಆಗುತ್ತಿದೆ. ಈ ದರ ಏರಿಕೆಗೆ ಉಳಿದ ಸಂಘ ಸಂಸ್ಥೆಗಳ ಜೊತೆ ಟಿಎಸ್ಎಸ್ ಪಾತ್ರವೂ ಪ್ರಮುಖವಾಗಿದೆ ಎಂದರು.
ಅಂಚೆ ಇಲಾಖೆ ಧಾರವಾಡ ವಿಭಾಗದ ಪೆÇೀಸ್ಟ್ ಮಾಸ್ತರ್ ಜನರಲ್ ಡಾ. ವಿನೋದಕುಮಾರ ಮಾತನಾಡಿ, ಜಿ ಐ ಟ್ಯಾಗ್ ಬಳಸಿ ಮಾರುಕಟ್ಟೆಯ ಲಾಭ ಪಡೆದು ಉತ್ಪಾದಕರು ಪ್ರಯೋಜನ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿ ಐ ಟ್ಯಾಗ್ ಕುರಿತು ವಿಶೇಷ ಕವರ್ ಬಿಡುಗಡೆಗೊಳಿಸಿ ಹೆಚ್ಚಿನ ಪ್ರಚಾರ ನೀಡುವ ಕಾರ್ಯವನ್ನು ಅಂಚೆ ಇಲಾಖೆ ಮಾಡುತ್ತಿದೆ ಎಂದರು. ಟಿಎಸ್ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ಅಂಚೆ ಇಲಾಖೆ ಅಧೀಕ್ಷಕ ಬಿ ಶಂಕರ ಇತರರಿದ್ದರು.