ಶಿರಸಿ: ಮೇಜರ್ ಧ್ಯಾನಚಂದ ಅವರ ಜನುಮದಿನದ ಸವಿ ನೆನಪಿಗಾಗಿ ಆ.29 ರಂದು ದೇಶದೆಲ್ಲೆಡೆ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಶಿರಸಿಯ ಅದ್ವೈತ ಸ್ಕೇಟರ್ಸ & ಸ್ಪೋರ್ಟ್ಸ್ ಕ್ಲಬ್ ಈ ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ತನ್ನ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯನ್ನು ಏರ್ಪಡಿಸಿತ್ತು.
ಸ್ಕೇಟಿಂಗ್ ಸ್ಪರ್ಧೆಗೆ ಚಾಲನೆಯನ್ನು ನೀಡಿ ಕ್ರೀಡಾಪಟುಗಳನ್ನು ಉದ್ಧೇಶಿಸಿ ಶಿರಸಿಯ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಕ್ರೀಡಾಪಟು ಜ್ಯೋತಿ ಭಟ್ ಮಾತನಾಡಿ ಹಿಂದಿನ ದಿನಗಳಿಗೆ ಹೊಲಿಸಿದರೆ ಇಂದಿನ ದಿನದಲ್ಲಿ ಕ್ರೀಡೆಗೆ ಹೆಚ್ಚಿನ ಪೊ?ರೀತ್ಸಾಹ ಸಿಗುತ್ತಿದೆ. ಸಾಧಿಸಲು ಇಂದು ಅನೇಕ ಅವಕಾಶಗಳಿವೆ. ಅದು ಕ್ರೀಡಾ ಕ್ಷೇತ್ರವಾಗಿರಬಹುದು ಅಥವಾ ಇನ್ನೀತರೇ ಕ್ಷೇತ್ರವಾಗಿರಬಹುದು. ಶಿರಸಿಯಂತಹ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಸ್ಕೇಟಿಂಗ್ ಕ್ರೀಡೆಯ ತರಬೇತಿ ಆರಂಭವಾಗಿದೆ. ಅನೇಕ ಸ್ಕೇಟಿಂಗ್ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಜೀವನದಲ್ಲಿ ಸಾಧಿಸಿದಾಗ ಸಿಗುವ ಸಾರ್ಥಕತೆ ಇನ್ನೆಲ್ಲೂ ಸಿಗುವುದಿಲ್ಲ. ಪರಿಶ್ರಮವೇ ಸಾಧನೆಗೆ ದಾರಿಯಾಗುವುದು ಎಂದು ಉಪಸ್ಥಿತರಿದ್ದ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಶಿರಸಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವಂತೆ ಪ್ರೇರೇಪಿಸಿದರು.
ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯನ್ನು ನಾಲ್ಕು ವಿಭಾಗದಲ್ಲಿ ಏರ್ಪಡಿಸಲಾಗಿದ್ದು, 11-14 ವರ್ಷದ ವಿಭಾಗದಲ್ಲಿ ನವೀನ ಮಡಿವಾಳ ಪ್ರಥಮ, ನವೀನ ಎಮ್ ಡಿ ದ್ವಿತೀಯ ಸ್ಥಾನ ಪಡೆದುಕೊಂಡರು. 9-11 ವರ್ಷದ ವಿಭಾಗದಲ್ಲಿ ಆರ್ಯನ್ ಮಾಡಗೆರಿ ಪ್ರಥಮ, ಅದ್ವೈತ ಪ್ರಹ್ಲಾದ ದೇವ ದ್ವಿತೀಯ ಸ್ಥಾನ ಪಡೆದುಕೊಂಡರು. 7-8 ವರ್ಷದ ವಿಭಾಗದಲ್ಲಿ ಖುಷಿ ಸಾಲೇರ ಪ್ರಥಮ, ಅದ್ವೈತ ಕಿರಣಕುಮಾರ ಕುಡಾಳಕರ ದ್ವಿತೀಯ ಸ್ಥಾನ, 5-7 ವರ್ಷದ ವಿಭಾಗದಲ್ಲಿ ಶಂಕರ ಗೌಡ ಪ್ರಥಮ, ಪ್ರಣೀತ ಜೋಗಳೆಕರ ದ್ವಿತೀಯ ಸ್ಥಾನ ಪಡೆದು ವಿಜೇತರಾದರು.
ವಿಜೇತರಿಗೆ ಕಾಮಧೇನು ಜ್ಯುವೇಲರಿಸ್ ಮಾಲಕರಾದ ಪ್ರಕಾಶ ಪಾಲನಕರ ಪ್ರಮಾಣಪತ್ರವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರಕಾಶ ಪಾಲನಕರ ಹಾಗೂ ರಾಷ್ಟ್ರೀಯ ಕ್ರೀಡಾಪಟು ಜ್ಯೋತಿ ಭಟ್ ಇವರನ್ನು ಸ್ಕೇಟಿಂಗ್ ಕ್ಲಬಿನ ಪ್ರಧಾನ ಕಾರ್ಯದರ್ಶಿ ಗೌರಿ ಲೋಕೇಶ್ ಹಾಗೂ ಟ್ರಸ್ಟಿ ವಿಶ್ವನಾಥ ಕುಡಾಳಕರ ಸನ್ಮಾನಿಸಿದರು.
ಸ್ಪರ್ಧೆಯ ಆರಂಭದಲ್ಲಿ ಕ್ರೀಡಾಪಟುಗಳಿಗೆ ಅರ್ಚನಾ ಪಾವುಸ್ಕರ ಕ್ರೀಡಾ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಶ್ಯಾಮಸುಂದರ ಸ್ಪರ್ಧೆಯ ನಿರ್ಣಾಯಕತ್ವ ವಹಿಸಿದರು. ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿಯನ್ನು ಕ್ಲಬಿನ ಕ್ರೀಡಾಪಟುಗಳ ಪಾಲಕ ಪೋಷಕರೇ ನಿರ್ವಹಿಸಿದ್ದರು. ಅದ್ವೈತ ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ, ತರಬೇತುದಾರರಾದ ತರುಣ ಗೌಳಿ ಪಾಲಕ ಪೋಷಕರು ಉಪಸ್ಥಿತರಿದ್ದರು