ಕುಮಟಾ: ಅಘನಾಶಿನಿ ನದಿಯ ಸುತ್ತ ಮುತ್ತಲ ಭಾಗದಲ್ಲಿ ಚಿಪ್ಪಿ ಗಣಿಗಾರಿಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟಾ ಹೇಳಿದರು.
ಅವರು ಈ ಕುರಿತಂತೆ ಶುಕ್ರವಾರ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಅಘನಾಶಿನಿ ನದಿ ಜಲಚರಗಳಾದ ಬಳಚು ಮೀನು, ಸಿಗಡಿ, ಕಲಗಾ, ಏಡಿ, ದಿಣಸಿ ಹಾಗೂ ಇತರೆ ಮೀನುಗಳ ಸಂತಾನೋತ್ಪತ್ತಿ ಪ್ರದೇಶವಾಗಿದ್ದು ಈ ಭಾಗದಲ್ಲಿ ಚಿಪ್ಪಿ ಗಣಿಗಾರಿಕೆ ನಡೆಯುವುದರಿಂದ ಇವುಗಳ ಸಂತತಿ ನಾಶವಾಗುವುದರ ಜೊತೆಗೆ ಅಘನಾಶಿನಿ ನದಿ ತೀರದ ಜೀವ ವೈವಿದ್ಯಮ ನಶಿಸುತ್ತದೆ. ಸಾವಿರಾರು ಪಕ್ಷಿ ಸಂಕುಲಗಳು ಆಹಾರಕ್ಕೆ ಸಮಸ್ಯೆಯಾಗಲಿದೆ.
ಜೊತೆಗೆ ಆದುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಸಿ ಚಿಪ್ಪಿ ತೆಗೆಯುವುದರಿಂದ ನದಿಯಲ್ಲಿ ದೊಡ್ಡ ಪ್ರಮಾಣದ ಹೊಂಡಗಳಾಗಿ ಮೀನುಗಾರಿಕೆಗೆ ಕಷ್ಟವಾಗುತ್ತದೆ.ಹೀಗಾಗಿ ಈಗಾಗಲೇ ಚಿಪ್ಪಿ ಗಣಿಗಾರಿಕೆಗೆ ಅನುಮತಿ ನೀಡಿದ್ದೆ ಆದಲ್ಲಿ ಅದನ್ನು ಸಂಭಂದಪಟ್ಟ ಅಧಿಕಾರಿಗಳು ರದ್ದುಪಡಿಸಬೇಕು ಎಂದರು.
ಮಿರ್ಜಾನ್ ಗ್ರಾ.ಪಂ ಸದಸ್ಯ ಗಣೇಶ ಅಂಬಿಗ ಮಾತನಾಡಿ ಚಿಪ್ಪಿ ಗಣಿಗಾರಿಕೆ ವಿರುದ್ದ ಈಗಾಗಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೂ ಮನವಿ ನೀಡಲಾಗಿದೆ.ಯಾರಿಂದಲೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ.ಮುಂದಿನ ದಿನಗಳಲ್ಲಿ ಮೀನುಗಾರರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದ್ದು, ಕಾನೂನು ಹೋರಾಟದ ಕುರಿತು ಈಗಾಗಲೇ ಚರ್ಚೆ ನಡೆಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮೀನುಗಾರ ಸಮಾಜದ ಪ್ರಮುಖರಾದ ಸುರೇಶ ಹರಿಕಾಂತ, ಶಿವರಾಮ ಹರಿಕಾಂತ, ಮಹೇಶ ಮೂಡಂಗಿ, ಸೂರ್ಯಕಾಂತ ಹರಿಕಾಂತ, ಮೋಹನ್ ಮೂಡಂಗಿ, ಭರತ್ ಹರಿಕಾಂತ, ಮಂಜುನಾಥ ಹರಿಕಾಂತ, ಶ್ರೀದರ ಹರಿಕಾಂತ, ಜಗದೀಶ ಹರಿಕಂತ್ರ, ಮೀನುಗಾರರಾದ ಬೀರಪ್ಪ ಹರಿಕಂತ್ರ,ಪ್ರವೀಣ ಅಂಬಿಗ, ಮಹಾಬಲೇಶ್ವರ ಅಂಬಿಗ ಇದ್ದರು