ಕುಮಟಾ: ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಸರಕಾರದ ಈಗಿನ ಆದೇಶದಂತೆ ಮನೆ ಹಾಗೂ ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಬೇಕು ಎಂದು ಸಹಾಯಕ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ ಹೇಳಿದರು.
ಅವರು ಪಟ್ಟಣದ ಪುರಭವನದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ ಕೋವಿಡ್ ಕಾರಣದಿಂದ ಸರಕಾರದ ನಿಯಮದಂತೆ ಈ ಬಾರಿಯ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವಂತೆ ಸೂಚಿಸಿದರು.
ತಹಶಿಲ್ದಾರ ವಿವೇಕ ಶೇಣ್ವಿ ಈ ಕುರಿತಂತೆ ಮಾಹಿತಿ ನೀಡಿ ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಆಚರಿಸಬೇಕು.ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣದ ಚಪ್ಪರ,ಪೆಂಡಾಲ್,ಶ್ಯಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಈ ವರೆಗೆ ಸರ್ಕಾರ ಅನುಮತಿ ನೀಡಿಲ್ಲ.ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ,ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸುವಂತಿಲ್ಲ.
ಪಾರಂಪರಿಕ ಗೌರಿ ಗಣೇಶ ಮೂರ್ತಿಯನ್ನು ಪೂಜಿಸುವವರು ಮನೆಯಲ್ಲಿಯೇ ವಿಸರ್ಜಿಸುವುದು ಅಥವಾ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗವನ್ನು ಬಳಸಿಕೊಂಡು ಜಿಲ್ಲಾಡಳಿತ, ತಾಲೂಕಾಢಳಿತ ಸ್ಥಳೀಯ ಸಂಸ್ಥೆಯ ಮಾರ್ಗದರ್ಶನ ಸೂಚನೆಯಂತೆ ನಿಗದಿತ ಸ್ಥಳದಲ್ಲಿ ಮೂರ್ತಿ ವಿಸರ್ಜನೆ ಮಾಡಬೇಕು.ಹಬ್ಬದ ವೇಳೆ ದೇವಸ್ಥಾನದಲ್ಲಿ ದಿನನಿತ್ಯ ಸ್ಯಾನಿಟೈಜ್ ಮಾಡಬೇಕು. ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಜರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿ ಕೋವಿಡ್ -19 ಮಾರ್ಗಸೂಚಿಯನ್ವಯ ಕಡ್ಡಾಯ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.ಇನ್ನು ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಂದ ಜನರು ಒಗ್ಗೂಡುವಿಕೆಯನ್ನು, ಬ್ರಹತ್ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದ್ದು, ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ ಮತ್ತು ಸಭೆ ಸಮಾರಂಭಗಳಿಗೆ ಅನುಮತಿ ನೀಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ , ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬಹುದು ಅಥವಾ ನೀಡದಿರಬಹುದು, ಅನುಮತಿ ನೀಡಿದಲ್ಲಿ ತಿಳಿಸಲಾಗುವುದು ಎಂದರು.
ಸಿಪಿಐ ಶಿವಪ್ರಕಾಶ ನಾಯ್ಕ ಮಾತನಾಡಿ ಈ ವರೆಗೆ ಸರ್ಕಾರ ನೀಡಿದ ಮಾರ್ಗಸೂಚನೆಯಲ್ಲಿ ಎಷ್ಟು ದಿನ ಎನ್ನುವ ಬಗ್ಗೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ನಮಗೆ ನೀಡಿರುವ ಮಾರ್ಗಸೂಚಿಗಳನ್ನು ತಿಳಿಸಿದ್ದೇವೆ.ಈ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಪೆಂಡಲ್, ಶ್ಯಾಮಿಯಾನ ಹಾಕಿ ರಸ್ತೆ ಪಕ್ಕದಲ್ಲಿ ಆಚರಿಸಲಾಗುತ್ತಿದ್ದ ಸಾರ್ವಜನಿಕ ಗಣೇಶೋತ್ಸವದ ಸ್ಥಳಗಳಿಗೆ ತಾಲೂಕಾಡಳಿತದ ಮಾರ್ಗದರ್ಶನದಂತೆ ಪೆÇೀಲಿಸ್ ಇಲಾಖೆಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಸಹಾಯಕ ಆಯುಕ್ತರಿಗೆ ನೀಡಲಿದೆ.ಇದಕ್ಕೆ ಸಮಿತಿಯವರು ಸಹಕರಿಸಬೇಕೆಂದು ಸೂಚನೆ ನೀಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶೈಲೇಶ್ ನಾಯ್ಕ ಮಾತನಾಡಿ ಮಾರ್ಕೆಟ್ ಗಳಲ್ಲಿ ಜನ ಮಾಸ್ಕ್, ಸ್ಯಾನಿಟೈಜರ್ ಇಲ್ಲದೇ ಗುಂಪುಗುಂಪಾಗಿ ಓಡಾಡುತ್ತಿದ್ದಾರೆ ಗಣೇಶೋತ್ಸವಕ್ಕೆ ಸೇರುವ ನೂರು ಜನರಿಂದ ಮಾತ್ರ ಕೋವಿಡ್ ಹರಡುತ್ತದೆಯೇ ಎಂದು ಪ್ರಶ್ನಿಸಿದರು.ಸರಕಾರದ ಕೋವಿಡ್ ಮಾರ್ಗಸೂಚಿ, ಕಾನೂನು ಕೇವಲ ಹಬ್ಬ ಹರಿದಿನಕ್ಕೋ ಅಥವಾ ರಾಜಕೀಯ ಕಾರ್ಯಕ್ರಮಕ್ಕೂ ಅನ್ವಯ ಆಗಲಿದೆಯೋ ಎಂದು ಪ್ರಶ್ನಿಸಿದ ಅವರು,ರಾಜಕೀಯ ನಾಯಕರು ಕಾರ್ಯಕ್ರಮ, ಮೆರವಣಿಗೆ ಮಾಡುತ್ತಿದ್ದಾರೆ ಇದರ ನಿಯಂತ್ರಣ ಸರಕಾರಕ್ಕೆ ಆಗುತ್ತಿಲ್ಲ ಇದಕ್ಕೆ ಅಧಿಕಾರಗಳ, ಜನಪ್ರತಿನಿಧಿಗಳ ಉತ್ತರವಿಲ್ಲ.ಕೇವಲ ಜನಸಾಮಾನ್ಯರ ಕಾರ್ಯಕ್ರಮಗಳಿಗೆ ಮಾತ್ರ ಸರಕಾರ ಯಾಕೆ ನಿರ್ಬಂಧ ಹೇರಲಾಗುತ್ತಿದೆ.ಹಬ್ಬಕ್ಕೆ ಬೇಕಾದ ತಯಾರಿಗಳಾದ ಗಣೇಶ ಮೂರ್ತಿ ತಯಾರಿಕೆ, ಉತ್ಸವದ ಆಮಂತ್ರಣ ಪತ್ರಿಕೆ ಮುದ್ರಣ, ಶ್ಯಾಮಿಯಾನ ನಿರ್ಮಾಣಕ್ಕೆ ವ್ಯವಸ್ಥೆಗೆ ಸಕಲ ಸಿದ್ದತೆಯಲ್ಲಿರುವ ವೇಳೆ ಸಭೆ ಕರೆದು ಸರಕಾರದ ಮಾರ್ಗಸೂಚಿಯನ್ನು ಈಗ ವಿವರಿಸಿದರೆ ಈಗಾಗಲೇ ಮಾಡಿದ ತಯಾರಿಗೆ ಸಮಿತಿ ಯವರು ಏನು ಮಾಡಬೇಕು. ಹೀಗಾಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ, ಪುರಸಭಾ ಸದಸ್ಯೆ ಮೋಹಿನಿ ಗೌಡ ಗಣೇಶೋತ್ಸವ ಸಮಿತಿ ಮುಖ್ಯಸ್ಥರು ಸೇರಿದಂತೆ ಸದಸ್ಯರು ಇದ್ದರು.