ಯಲ್ಲಾಪುರ: ಆನ್ ಲೈನ್ ಶಿಕ್ಷಣಕ್ಕಿಂತ ಆಫ್ ಲೈನ್ ಶಿಕ್ಷಣವೇ ಉತ್ತಮ. ಅದಕ್ಕಾಗಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ತಾಲೂಕಿನ ಹುತ್ಕಂಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಬಾರ್ಡ್ ಅನುದಾನದಡಿ ನಿರ್ಮಿಸಿದ ನೂತನ ಕೊಠಡಿ ಉದ್ಘಾಟಿಸಿ, ಜಿ.ಪಂ ಅನುದಾನದಡಿ ನಿರ್ಮಿಸಲಿರುವ ನೂತನ ಕೊಠಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೋವಿಡ್ ಬಗೆಗೆ ಭಯಪಡುವುದು ಬೇಡ, ಆದರೆ ಮುನ್ನೆಚ್ಚರಿಕೆ ಇರಬೇಕು ಎಂದ ಅವರು ಬೀಳುವ ಹಂತದಲ್ಲಿರುವ ಶಾಲೆಯ ಕಟ್ಟಡಗಳನ್ನು ಕೆಡವಲು ಜಿಲ್ಲಾ ಮಟ್ಟದ ಅಧಿಕಾರಿಗಳ ಅನುಮತಿಗಾಗಿ ಕಾಯುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅದನ್ನು ಪರಿಹರಿಸಿ, ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.
ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಉಪಾಧ್ಯಕ್ಷೆ ಶಾಂತಿ ಪಟಗಾರ, ಸದಸ್ಯ ಆರ್.ಎಸ್.ಭಟ್ಟ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ತಾಲೂಕು ಅಧ್ಯಕ್ಷ ಆರ್.ಆರ್.ಭಟ್ಟ, ಬಿ.ಆರ್.ಸಿ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಮುಖ್ಯಾಧ್ಯಾಪಕ ಸತೀಶ ಶೆಟ್ಟಿ ಇತರರಿದ್ದರು.