ಶಿರಸಿ: ಹಾಕಿ ಕ್ರೀಡೆಯ ಮಾಂತ್ರಿಕ ದ್ಯಾನ್ ಚಂದ್ ನೆನಪಿಗೆ ಕೇಂದ್ರ ಸರಕಾರ ಆ.29 ರಂದು ದೇಶದಾದ್ಯಂತ ’ರಾಷ್ಟ್ರೀಯ ಕ್ರೀಡಾ ದಿನ’ ಆಚರಿಸುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರೀಡಾ ಮನೋಭಾವನೆಯ ಪೂರಕವಾದ ಪರಿಸರದ ಕೊರತೆ ಇರುವುದರಿಂದ ಸರಕಾರವು ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪೂರಕ ಕ್ರಿಯಾ ಯೋಜನೆ ಪ್ರಕಟಿಸಲು ಕ್ರೀಡಾಸಕ್ತರಿಂದ ಒತ್ತಾಯ ಕೇಳಿ ಬರುತ್ತಿದೆ.
ಆ. 29 ರಾಷ್ಟ್ರೀಯ ಕ್ರೀಡಾದಿನದಂದು ದೇಶದಾದ್ಯಂತ ಕ್ರೀಡಾ ಉತ್ಸವ, ಕ್ರೀಡಾ ಸೌಲಭ್ಯ, ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಕಾರ್ಯ ಜರುಗುತ್ತಿದ್ದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಅಸಮರ್ಪಕ ಕ್ರೀಡಾಂಗಣ ’ಸೌಲಭ್ಯ ವಂಚಿತ ಕ್ರೀಡಾಪಟುಗಳ ಸ್ಥಿತಿ ಮರುಕಳಿಸುವ ದಿನ’ ವಾಗಿದೆ ಎಂದರೆ ತಪ್ಪಾಗಲಾರದು. ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಉದಯ ಪ್ರಭು, ಕಾಶಿನಾಥ ನಾಯ್ಕ ಬೆಂಗಳೆ ಮುಂತಾದ ಕ್ರೀಡಾಪಟುಗಳನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಹೊಸ ಪ್ರತಿಭೆಗಳು ಸೌಲಭ್ಯ ವಂಚಿತರಾಗುತ್ತಿರುವುದಕ್ಕೆ ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ರಾಜ್ಯದಲ್ಲಿಯೇ ಅತ್ಯಂತ ವಿಶಾಲ ಪ್ರದೇಶದಿಂದ ಆವೃತ್ತವಾಗಿರುವ ಶಿರಸಿಯ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣವು ಹಣಕಾಸಿನ ಕೊರತೆಯಿಂದ ಪೂರ್ತಿಗೊಳ್ಳದ ಓಟದ ಪಥದ ಕಾಮಗಾರಿ, ಎರಡು ದಶಕದಿಂದ ಇಲ್ಲದ ತರಬೇತಿದಾರರು, ಕ್ರೀಡಾ ಪಟುಗಳ ದೈಹಿಕ ಸಾಮರ್ಥ್ಯದ ಉಪಕರಣದ ಕೊರತೆ, ಭದ್ರತೆ ಇಲ್ಲದ ಆವರಣ, ಹೊರಾಂಗಣ ಗಿಡಗಂಟಿಯಿಂದ ತುಂಬಿಕೊಂಡಿರುವುದು, ಕತ್ತಲೆಯಾದ ಮೇಲೆ ಅನೈತಿಕ ಚಟುವಟಿಕೆ ನಿಯಂತ್ರಿಸಲು ಪೋಲಿಸರ ಪ್ರವೇಶ ಹಾಗೂ ಸಾಕಷ್ಟು ಬೆಳಕಿನ ಕೊರತೆ ಮುಂತಾದ ಕೊರತೆಗಳ ವ್ಯವಸ್ಥೆಯಿಂದ ಶಿರಸಿಯ ಜಿಲ್ಲಾ ಕ್ರೀಡಾಂಗಣ ಇರುವುದು ವಿಷಾದಕರ.
ಇದೇ ರೀತಿಯ ಪರಿಸ್ಥಿತಿ ಜಿಲ್ಲಾದ್ಯಂತ ಇರುವ ಮುಂಡಗೋಡ, ಜೊಯಿಡಾ, ಭಟ್ಕಳ, ಅಂಕೋಲಾ, ಸಿದ್ಧಾಪುರ, ಕುಮಟ, ಹೊನ್ನಾವರ, ಯಲ್ಲಾಪುರ ತಾಲೂಕು ಕ್ರೀಡಾಂಗಣಗಳಲ್ಲಿಯೂ ಇಂತಹ ಚಿತ್ರಣವೇ ಕಂಡು ಬರುತ್ತದೆ. ರಾಷ್ಟ್ರೀಯ ಕ್ರೀಡಾ ನೀತಿಯಂತೆ ಪ್ರತಿ ಜಿಲ್ಲೆಯಲ್ಲಿಯೂ ಒಂದು ಸಿಂಥೆಟಿಕ ಕ್ರೀಡಾಂಗಣ ಇರಬೇಕೆಂಬ ನಿಯಮವಿದ್ದಾಗಲೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಿಂಥೆಟಿಕ್ ಕ್ರೀಡಾಂಗಣ ಇದ್ದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸಿಂಥೆಟಿಕ್ ಕ್ರೀಡಾಂಗಣ ಮರಿಚಿಕೆಯಾಗಿದೆ.
ಇಚ್ಛಾಶಕ್ತಿಯ ಕೊರತೆ: ಜಿಲ್ಲೆಯ ಯುವ ಕ್ರೀಡಾಪಟುಗಳ ಕ್ರೀಡಾಪೂರಕ, ಕ್ರೀಡಾ ವ್ಯವಸ್ಥೆಯ, ಕಾರ್ಯ ಯೋಜನೆ, ಜಾರಿಗೆ ತರುವಲ್ಲಿ ಸರಕಾರದ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದ್ದು, ಮಾನಸಿಕ, ದೈಹಿಕ, ಪ್ರತಿಭಾವಂತ ಕ್ರೀಡಾಪಟುಗಳು ಇದ್ದರೂ ಸರಕಾರದ ಸೌಲಭ್ಯ ಪ್ರೋತ್ಸಾಹದ ಕೊರತೆಯಿಂದ ಜಲ್ಲೆಯ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿರುವುದು ವಿಶಾದಕರ ಎಂದು ಸ್ಪಂದನ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.