ಕುಮಟಾ: ಮಂಗಳೂರು ಕೆಎಂಸಿ ಆಸ್ಪತ್ರೆಯ ಕಾರ್ಡಿಯೋಲಾಜಿ ವಿಭಾಗದ ಮುಖ್ಯಸ್ಥರಾದ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾಕ್ಟರ್ ಪದ್ಮನಾಭ ಕಾಮತ ಅವರು ಸಿಡಿಎ ಫೌಂಡೇಶನ್ ಮೂಲಕ ನೀಡಲಾಗುವ 415 ನೇಯ ಇ ಸಿ ಜಿ ಯಂತ್ರವನ್ನು ತಾಲೂಕಿನ ಕಾಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ನೀಡಿದ್ದು, ಕುಮಟಾದ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಆರ್ ಜಿ ನಾಯ್ಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಆಧುನಿಕ ಜೀವನ ಶೈಲಿ ಹಾಗೂ ಅಸಂತುಲಿತ ಆಹಾರ ಪದ್ಧತಿ ಜೊತೆಗೆ ಮಿತಿಮೀರಿದ ಮಾನಸಿಕ ಒತ್ತಡಗಳಿಂದ ಇಂದು ಅಪಾರಮಂದಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ,ಹೃದಯ ಸ್ತಂಭನಗಳಿಂದ ಮರಣ ಹೊಂದುತ್ತಿರುವ ಅಂಶವು ಮನುಕುಲವನ್ನೇ ತಲ್ಲಣಗೊಳಿಸುತ್ತಿದೆ.ಕೆಲವೊಮ್ಮೆ ಸೂಕ್ತ ಚಿಕಿತ್ಸೆ ದೊರೆತರೆ ಬದುಕಿಸಬಹುದಿತ್ತು ಎಂಬ ಅಸಹಾಯಕತೆಯ ನುಡಿಗಳೂ ಕೇಳಿಬರುತ್ತಿದೆ.ಗ್ರಾಮೀಣ ಪ್ರದೇಶಗಳಲ್ಲಿ ವಾಸಮಾಡುವವರಿಗಂತೂ ಪ್ರಾಥಮಿಕ ಚಿಕಿತ್ಸೆಗೂ ಕಷ್ಟ ಎನಿಸುವ ವಾತಾವರಣ ಇರುತ್ತದೆ.ಇವುಗಳನ್ನೆಲ್ಲಾ ಗಮನಿಸಿದ ಖ್ಯಾತ ಹೃದಯರೋಗ ತಜ್ಞರಾದ ಡಾಕ್ಟರ್ ಪದ್ಮನಾಭ ಕಾಮತ್ ರವರು ಹಲವಾರು ಪ್ರಾಥಮಿಕ ಚಿಕಿತ್ಸಾಕೇಂದ್ರಗಳಿಗೆ ಅತ್ಯಮೂಲ್ಯವಾದ ಇ ಸಿ ಜಿ ಯಂತ್ರಗಳನ್ನು ಉಚಿತವಾಗಿ ವಿತರಿಸುವುದರ ಮೂಲಕ ಬಡವರ ಆಶಾಕಿರಣ ಎನಿಸಿದ್ದಾರೆ.ಈ ವರೆಗೆ ಕರ್ನಾಟಕದಲ್ಲಿ 414 ಇಸಿಜಿ ಯಂತ್ರವನ್ನು ನೀಡಿರುವ ಇವರು, ಕಾಗಾಲ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ನೀಡಿರುವುದು 415 ನೆಯ ಯಂತ್ರವಾಗಿದೆ.ವೈದ್ಯರ ಈ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಸಿದ್ದಾರೆ.
ಪ್ರಸ್ತುತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯನ್ನು ಅನುಭವಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಗೂ ವೈದ್ಯಕೀಯವಾಗಿ ಮಹ್ವತ್ವದ ಕೊಡುಗೆಗಳನ್ನು ಕೊಡಬೇಕೆಂಬ ಕಳಕಳಿಯನ್ನು ಹೊಂದಿರುವ ಕಾಮತರಿಗೆ ತಾಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಪ್ರಾಥಮಿಕ ಆರೋಗ್ಯಕೇಂದ್ರ ವೈದ್ಯರಾದ ಸತೀಶ ಭಟ್ಟ ಹಾಗೂ ಆರೋಗ್ಯ ಸಿಬ್ಬಂದಿಗಳು ಇದ್ದರು.