ಶಿರಸಿ: ಲಯನ್ಸ ಕ್ಲಬ್ ದೇಶದ 75ನೇ ಬಾರಿಯ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ, ಐವರು ನಿವೃತ್ತ ವೀರ ಯೋಧರ ಸಮಕ್ಷಮದಲ್ಲಿ ಸ್ವಾತಂತ್ರ್ಯ ಯೋಧ ಕಾಶೀನಾಥ ಮೂಡಿ ಅವರನ್ನು ಹಾಗೂ 22 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಹದಿನಾಲ್ಕೂವರೆ ವರ್ಷ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸುಬೇದಾರ ರಾಮು ಈಚರಪ್ಪಾ ಅವರನ್ನು ಸನ್ಮಾನಿಸಿದರು.
ತದನಂತರ ಸನ್ಮಾನಿತ ಸ್ವಾತಂತ್ರ್ಯಯೋಧ ಕಾಶಿನಾಥ ಮೂಡಿ ಮಾತನಾಡಿ ತಮ್ಮ ಹೋರಾಟದ ಬಗೆಯನ್ನು ಸ್ಮರಿಸಿಕೊಳ್ಳುತ್ತಾ, ತಾವು 12 ವರ್ಷದವನಿದ್ದಾಗ ಮಹಾತ್ಮಾ ಗಾಂಧಿಯವರು ಶಿರಸಿಗೆ ಆಗಮಿಸಿದ್ದು, ಅವರಿಂದ ಉಡುಗೊರೆಯಾಗಿ ಟೋಪಿ ಪಡೆದಿದ್ದು ಇತ್ಯಾದಿ ವಿವರವನ್ನು ಎಳೆ-ಎಳೆಯಾಗಿ ವಿವರಿಸಿದರು. 91ರ ತಮ್ಮ ಇಳಿ ವಯಸ್ಸಿನಲ್ಲಿಯೂ ಯುವಕರು ನಾಚುವ ರೀತಿಯಲ್ಲಿ, ಅತ್ಯಂತ ಉತ್ಸಾಹದಿಂದ ಮಾತನಾಡುತ್ತ ಒಂದು ಹಂತದಲ್ಲಿ ಗದ್ಗತಿತರಾಗಿ, ಸಂಸತ್ತಿನಲ್ಲಿ, ವಿಧಾನ ಸಭೆಗಳಲ್ಲಿ ಈಗಿನ ಕೆಲವು ಜನಪ್ರತಿನಿಧಿಗಳಿಂದ ನಡೆಯುವ ಅನೈತಿಕ ಮತ್ತು ಬೇಜವಾಬ್ದಾರಿ ನಡವಳಿಕೆಗಳನ್ನು ನೆನಪಿಸಿಕೊಂಡು, ಕಷ್ಟಪಟ್ಟು ಪಡೆದ ಸ್ವಾತಂತ್ರ್ಯವನ್ನು ಇಂತಹವರ ಕೈಗೆ ನೀಡಿದೆವಾ? ಎಂಬುದಾಗಿ ವಿಷಾದದ, ನೋವಿನ ಭಾವ ವ್ಯಕ್ತಪಡಿಸಿದರು.
ಅಂತೆಯೇ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು, ಶಿರಸಿಗರು ಅಭಿಮಾನ ಪಡುವಂತೆ ಮಾಡಿದ ಲಯನ್ಸ ಶಾಲೆಯ ವಿದ್ಯಾರ್ಥಿನಿ ರಜತಾ ಸೇರಿದಂತೆ ಆರು ರ್ಯಾಂಕ್ ಪಡೆದ ಲಯನ್ಸ ಶಾಲೆಯ ಎಲ್ಲ ಮಕ್ಕಳನ್ನು ಪುರಸ್ಕರಿಸಿತು. ಸನ್ಮಾನಿತ ಸುಬೇದಾರ ರಾಮು ಅವರು ಯುದ್ಧದ ಮಾಹಿತಿಗಳನ್ನೊಳಗೊಂಡ ಕೆಲವು ಪ್ರಾತ್ಯಕ್ಷಿತೆಯನ್ನು ಪ್ರಸ್ತುತಪಡಿಸಿ ಕಾಶ್ಮೀರವನ್ನು ಉಳಿಸಿಕೊಳ್ಳುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಸೈನಿಕರು ಹಾಗೂ ಗಣ್ಯ ವ್ಯಕ್ತಿಗಳನ್ನು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷ ಸ್ಟಾದಿ ಸ್ವಾಗತಿಸಿದರು, ಕೋಶಾಧ್ಯಕ್ಷೆ ಅನಿತಾ ಶ್ರೀಕಾಂತ ಧ್ವಜವಂದನೆ ನೆರವೇರಿಸಿದರು. ಮಾಸ್ಟರ್ ಸಾತ್ವಿಕ್ ಪ್ರಾರ್ಥನೆ ಹಾಡಿದರು. ಪ್ರೊ.ರವಿ ನಾಯಕ ಹಾಗೂ ರಮಾ ಪಟವರ್ಧನ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ವಿನಯ ಹೆಗಡೆ ಧನ್ಯವಾದ ಸಮರ್ಪಿಸಿದರು ಹಾಗೂ ಶ್ರೀಕಾಂತ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.