ಶಿರಸಿ: ಕಳೆದ ನಲುವತ್ತು ವರುಷಗಳಿಂದ ಮೂಡು ಬಿದಿರೆಯ ಪ್ರತಿಷ್ಠಿತ ವರ್ಧಮಾನ ಸಾಹಿತ್ಯಪೀಠವು ನೀಡುವ ವರ್ಧಮಾನ ಪ್ರಶಸ್ತಿಯನ್ನು ತಾಲೂಕಿನ ಆಲ್ಮನೆ ಮಸಗುತ್ತಿಮನೆಯ ಡಾ.ಜಿ.ಎಂ.ಹೆಗ್ಡೆ ಅವರಿಗೆ ಪ್ರಕಟಿಸಲಾಗಿದೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಮೈಸೂರಿನ ಡಾ. ಜ್ಯೋತಿ ಶಂಕರ್ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ. ಕಾಂತಾವರದ ಕನ್ನಡ ಭವನದಲ್ಲಿ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನಾಡಿನೆಲ್ಲೆಡೆಯಿಂದ ಬಂದ ಶಿಫಾರಸುಗಳು ಹಾಗೂ ಸಾಹಿತಿಗಳ ಜೀವಮಾನದ ಸಾಧನೆಯ ಆಧಾರದಲ್ಲಿ ಡಾ.ಬಿ.ಜನಾರ್ದನ ಭಟ್, ಬೆಳಗೋಡು ರಮೇಶ ಭಟ್ ಮತ್ತು ಡಾ.ಎಸ್.ಪಿ.ಸಂಪತ್ ಕುಮಾರ್ ಅವರನ್ನೊಳಗೊಂಡ ತೀರ್ಪುಗಾರರ ಬಳಗ ಈ ಪ್ರಶಸ್ತಿಗಳನ್ನು ನಿರ್ಣಯಿಸಿದೆ ಎಂದು ಪೀಠದ ಪ್ರಧಾನ ನಿರ್ದೆಶಕ ಡಾ.ನಾ.ಮೊಗಸಾಲೆ ತಿಳಿಸಿದ್ದಾರೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ರೂಪಾ ಇಪ್ಪತ್ತೈದು ಸಾವಿರ ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿಗೆ ರೂಪಾ ಹದಿನೈದು ಸಾವಿರಗಳ ಗೌರವ ಸಂಭಾವನೆಯಿದ್ದು, ತಾಮ್ರ ಪತ್ರದ ಜೊತೆ ಸನ್ಮಾನವನ್ನೂ ಇವು ಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭ ದಸರಾ ಉತ್ಸವ ಸಂದರ್ಭದಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿದ್ದು ದಿನಾಂಕವನ್ನು ಮುಂದೆ ಪ್ರಕಟಿಸಲಾಗುತ್ತದೆ.
ವಿಶ್ರಾಂತ ಪ್ರಾಧ್ಯಾಪಕ , ಹಿರಿಯ ವಿಮರ್ಶಕ ಡಾ. ಜಿ.ಎಂ. ಹೆಗ್ಡೆ ಕಳೆದ ಮೂರು ನಾಲ್ಕು ದಶಕಗಳಿಂದ ಧಾರವಾಡದ ಸಾಹಿತ್ಯ ಚಟುವಟಿಕಗಳಲ್ಲಿ ಮುಂಚೂಣಿಯಲ್ಲಿದ್ದು ಸಂಶೋಧನೆ ಅಧ್ಯಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 20ಕ್ಕೂ ಅಧಿಕ ವಿಮರ್ಶಕ ಕೃತಿಗಳು, 40 ಸಂಪಾದಿತ ಗ್ರಂಥಗಳು, 400ಕ್ಕೂ ಅಧಿಕ ಪುಸ್ತಕ ವಿಮರ್ಶೆ ನಡೆಸಿರುವ ಹೆಗ್ಡೆ ಸಂಶೋಧನಾ ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮ ಸಾಹಿತ್ಯ ಮತ್ತು ಸಹೃದಯತೆ ಕೃತಿಗಾಗಿ ಸ. ಸ ಮಾಳವಾಡ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅನೇಕ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.