ಶಿರಸಿ: ಜೀವ ಜಲ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಮಾದರಿ ಕಾರ್ಯ ಮಾಡುತ್ತಿರುವ ಜಲಯೋಗಿ ಶ್ರೀನಿವಾಸ ಹೆಬ್ಬಾರ್ ಅವರ ಬಹು ದಿನದ ಕನಸಿನ ‘ಸ್ವಚ್ಛತೆ ನಮ್ಮ ಮೊದಲ ಆದ್ಯತೆ’ಗೆ ಶುಕ್ರವಾರ ಚಾಲನೆ ಸಿಗಲಿದೆ.
ಕೆರೆ ಹೆಬ್ಬಾರ್ ಎಂದೇ ಹೆಸರಾದ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ ಜೀವ ಜಲ ಕಾರ್ಯಪಡೆ ಕಟ್ಟಿಕೊಂಡು ನಗರದಲ್ಲಿ ಆರಕ್ಕೂ ಅಧಿಕ ಕೆರೆಗಳಿಗೆ ಪುನರುಜ್ಜೀವನ ಮಾಡುವ ಮೂಲಕ ಮನೆ ಮಾತಾಗಿದ್ದರು. ಆ ತಂಡ ಈಗ ನಿರಂತರ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದೆ.
ನಗರದ ಹೊರ ವಲಯದಲ್ಲಿ ಬೇಕಾ ಬಿಟ್ಟಿ ತ್ಯಾಜ್ಯ ಬಿಸಾಕುವವರಿಗೂ ಈ ಹಿಂದೆ ದುಃಸ್ವಪ್ನವಾಗಿ ಕೂಡ ಹೆಬ್ಬಾರ್ ರ ಜೀವ ಜಲಕಾರ್ಯಪಡೆ ಕೆಲಸ ಮಾಡಿತ್ತು.
ಶಿರಸಿ ಕಾಲೇಜ್ ರಸ್ತೆಯಲ್ಲಿ ಬೇಕಾ ಬಿಟ್ಟಿ ಕಸ ಹಾಕುತ್ತಿದ್ದವರಿಗೂ ಸಿಸಿಟಿವಿ ಹಾಕಿಸಿ ಬಿಸಿಮುಟ್ಟಿಸಿದ್ದರು. ಜಲ ಉಳಿಸಿದರೆ ಆಗದು, ಜಲ ಮಲೀನ ಆಗದಂತೆ ನೋಡಿಕೊಳ್ಳಬೇಕು ಎಂದು ಹೆಬ್ಬಾರ್ ಕೆಲಸ ಆರಂಭಿಸಿದ್ದರು.
ಇದೀಗ ಶ್ರೀನಿವಾಸ ಹೆಬ್ಬಾರ ಅವರ ತಂಡ ಮತ್ತೊಮ್ಮೆ ಸ್ವಚ್ಛತಾ ಅಭಿಯಾನಕ್ಕೆ ಕಂಕಣ ಕಟ್ಟಿಕೊಂಡಿದೆ.
ಇಡೀ ನಗರದ ಹಾಗೂ ನಗರ ಜೋಡಿಸುವ ಪ್ರಮುಖ ರಸ್ತೆಗಳ ಮಾರ್ಗದಲ್ಲಿ ಸ್ವಚ್ಛತೆ ಮಾಡುವ ಹಾಗೂ ಶಿರಸಿ ಸುಂದರ ನಗರವಾಗಿಸುವ ಕನಸಿನಲ್ಲಿ ಈ ಕಾರ್ಯ ಆರಂಭವಾಗಿದೆ.
ಕುಮಟಾ, ಬನವಾಸಿ, ಯಲ್ಲಾಪುರ, ಕುಳವೆ, ಕರಿಗುಂಡಿ, ಸಿದ್ದಾಪುರ ಸೇರಿದಂತೆ ಎಲ್ಲ ಮಾರ್ಗಗಳ ಸುಮಾರು ೫ ಕಿಮಿ ವ್ಯಾಪ್ತಿಯಲ್ಲಿ ಸ್ವಚ್ಛತೆ ನಡೆಸಲಿದ್ದಾರೆ.
ಈ ನೂತನ ಅಭಿಯಾನಕ್ಕೆ ಈಗಾಗಲೇ ಒಂದು ಹೊಸ ಟ್ರಾಕ್ಟರ್ ಕೂಡ ಖರೀದಿಸಲಾಗಿದೆ. ಟಿಪ್ಪರ್ ಹಾಗೂ ಜೆಸಿಬಿ ಬಳಸಿ ಹತ್ತು ಜನರ ತಂಡ ನಿರಂತರ ಕಸ ಎತ್ತಲಿದೆ. ನಗರಸಭೆ ಈಗಾಗಲೇ ನಡೆಸುತ್ತಿರುವ ತ್ಯಾಜ್ಯ ಸಂಗ್ರಹಕ್ಕೆ ಪೂರಕವಾಗಿ ಈ ಅಭಿಯಾನ ನಡೆಯಲಿದೆ.
ಈ ಸ್ವಚ್ಛತಾ ಅಭಿಯಾನಕ್ಕೆ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಶಿರಸಿ ನಗರಸಭೆ ಅವರಣದಲ್ಲಿ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ವಿಜಯ ಕರ್ನಾಟಕದ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಪೌರಾಯುಕ್ತ ಕೇಶವ ಛೌಗಲೆ ಚಾಲನೆ ನೀಡಲಿದ್ದಾರೆ.
ಸ್ವಚ್ಛತೆಗೆ ಎಲ್ಲರೂ ಜೊತೆಯಾಗಬೇಕು. ಒಟ್ಟಾರೆ ಶಿರಸಿ ಸುಂದರವಾಗಿರಬೇಕು ಎಂಬುದು ನಮ್ಮ ಆಶಯ. ಒಂದು ತಿಂಗಳು ಸಮಾರೋಪಾದಿ ಕೆಲಸ ಮಾಡಿದರೆ ಒಂದು ಹಂತದ ಸ್ವಚ್ಛತೆ ಆಗಬಹುದು.
- ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು ಜೀವ ಜಲಕಾರ್ಯಪಡೆ