ಶಿರಸಿ: ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು ಧಾರವಾಡ ಹಾಲು ಒಕ್ಕೂಟದ ವತಿಯಿಂದ ಕಲಕರಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಕ್ಕೆ ರೂ. 3.5ಲಕ್ಷ ಅನುದಾನ ಮಂಜೂರಾಗಿದ್ದು, ಕಟ್ಟಡದ ಅನುದಾನದ ಮೊದಲ ಹಂತದ ಮೊತ್ತ ರೂ. 1.75ಲಕ್ಷ ಚೆಕ್’ನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಕೆ.ಡಿ.ಸಿ.ಸಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ವಿತರಿಸಿದರು. ಹಾಗೂ ಬೊಪ್ಪನಳ್ಳಿ ಹಾಗೂ ತಿಗಣಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಗಣಕ ಯಂತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಜಿಲ್ಲೆಯ ಎಲ್ಲ ಸಂಘಗಳು ಸ್ವಂತ ಕಟ್ಟಡ ಹೊಂದುವಂತೆ ಮಾಡುವುದು ಮುಖ್ಯ ಗುರಿಯಾಗಿದ್ದು, ಆ ದಿಶೆಯಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಸಂಘಗಳು ಸ್ವಾವಲಂಭಿಗಳಾಗಿ ಸ್ವಂತ ಕಟ್ಟಡಗಳನ್ನು ಹೊಂದಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದಾಗಿದೆ ಎಂದರು. ಅದೇ ರೀತಿ ಪ್ರತೀ ಸಂಘವನ್ನು ಗಣಕೀಕೃಗೊಳಿಸಿ ಎಲ್ಲ ಸಂಘಗಳು ಗಣಕಯಂತ್ರಗಳನ್ನು ಹೊಂದಿ ಪ್ರಸ್ತುತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತಮ್ಮ ಕಾರ್ಯವೈಖರಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗುವಂತೆ ಮಾಡುವುದು ನಮ್ಮ ಉದ್ದೇಶ ಎಂದರು.
ನಿರ್ದೇಶಕರ ಸಂಘಗಳಡೆಗಿನ ಬಗ್ಗೆ ಕಾಳಜಿ ಹಾಗೂ ಅತ್ಯಂತ ಉತ್ತಮ ರೀತಿಯ ಕಾರ್ಯವೈಖರಿ ಬಗ್ಗೆ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷಪ್ರಭಾಕರ ಹೆಗಡೆ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಧಾರವಾಡ ಹಾಲು ಒಕ್ಕೂಟದ ಉತ್ತರ ಕನ್ನಡ ಜಿಲ್ಲಾಮುಖ್ಯಸ್ಥ ಎಸ್ ಎಸ್ ಬಿಜೂರ್, ಪಶು ವೈದ್ಯಾಧಿಕಾರಿ ಡಾ. ರಾಕೇಶ ತಲ್ಲೂರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾಧಿಕಾರಿ ದಯಾನಂದ ಬೋರ್ಕರ್, ಅಭಿಷೇಕ ನಾಯ್ಕ, ಹಾಗೂ ಕಲಕರಡಿ ಸಂಘದ ಅಧ್ಯಕ್ಷ ಕೆಎಸ್ ಡಿಸೋಜಾ, ಸಂಘದ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಸೀತಾರಾಮ ಭಟ್ ಇವರು ಉಪಸ್ಥಿತರಿದ್ದರು.