ಶಿರಸಿ: ಜಿಲ್ಲೆಯಲ್ಲಿ ಸುಸ್ಥಿರ ಮತ್ತು ಆರೋಗ್ಯಕರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಅವಶ್ಯಕ ಸೌಕರ್ಯವನ್ನು ಮಾಡಲಾಗುವುದು ಎಂದು ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಹೇಳಿದರು.
ಅವರು ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಉತ್ತರಿಸುತ್ತಾ ಮಾತನಾಡಿ, ಪ್ರಧಾನಿ ಮೋದಿಯವರ ಆಶಯದಂತೆ ಭಾರತದ ಅಭಿವೃದ್ಧಿಗೆ ನಾವೆಲ್ಲರೂ ಬದ್ಧರಿದ್ದೇವೆ. ಜನರ ಮತ್ತು ಕ್ಷೇತ್ರದ ಸಮಸ್ಯೆ ಅರಿಯುವ ನಿಟ್ಟಿನಲ್ಲಿ ಜನಾಶೀರ್ವಾದ ಯಾತ್ರೆ ಆಯೋಜಿಸಲಾಗಿದೆ. ಕೊವಿಡ್ ಸಮಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜಿಲ್ಲೆಯ ಪ್ರವಾಸೋದ್ಯಮ ವಿಚಾರದಲ್ಲಿ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಲಾಕ್ ಡೌನ್ ಕಾರಣಕ್ಕೆ ವರ್ಕ್ ಪ್ರಾಮ್ ಹೋಮ್ ಮಾಡುವವರ ಸಂಖ್ಯೆ ಈ ಭಾಗದಲ್ಲಿ ಗಣನೀಯ ಹೆಚ್ಚಿದ್ದು, ಅದಕ್ಕೆ ಅನಿವಾರ್ಯವಾದ ಇಂಟರ್ ನೆಟ್ ಸೌಲಭ್ಯವನ್ನು ಭಾರತ್ ನೆಟ್ ಯೋಜನೆಯ ಮೂಲಕ ಡಿಜಿಟಲ್ ಭಾರತವನ್ನು ನಾವು ಸದ್ಯದಲ್ಲಿಯೇ ಸಾಧಿಸಲ್ಲಿದ್ದೇವೆ ಎಂದರು. ನಾನು ಸಚಿವನಾಗಿ ಕೇವಲ ಒಂದು ತಿಂಗಳಷ್ಟೇ ಆಗಿದೆ. ಒಂದಷ್ಟು ನೂತನ ವಿಚಾರಗಳನ್ನು ಯೋಜಿಸಲಾಗಿದೆ. ಆ ನಿಟ್ಟಿನಲ್ಲಿ ನನ್ನ ಕೈಲಾದ ಕೆಲಸ ಮಾಡುತ್ತೇನೆ. ಆದರೆ ಸಮಯಾವಕಾಶದ ಅವಶ್ಯಕತೆ ಇದೆ ಎಂದರು.
ಜನವರಿ 2020ರ ನಂತರದಲ್ಲಿ ಪ್ರಪಂಚಾದ್ಯಂತ ಕೊವಿಡ್ ವ್ಯಾಪಿಸಿದೆ. ಭಾರತ ಈ ಕೊವಿಡ್ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸುತ್ತಿದೆ. ಮತ್ತು ಅದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಿಭಾಯಿಸಲು ಜನರ ಸಹಕಾರ ಮತ್ತು ಆಶೀರ್ವಾದದ ಅಗತ್ಯತೆ ಇದೆ. ಆ ಹಿನ್ನಲೆಯಲ್ಲಿ ನೂತನ ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದರು.
ಸುದ್ಧಿಗೋಷ್ಟಿಯಲ್ಲಿ ಸಚಿವ ಶಿವರಾಮ ಹೆಬ್ಬಾರ್, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ್ ಹೆಗಡೆ, ಎಂಎಲ್ಸಿ ಶಾಂತಾರಾಮ ಸಿದ್ದಿ, ವಿ ಎಸ್ ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು. ಜಿಲ್ಲಾ ಬಿಜೆಪಿ ಸಹ ವಕ್ತಾರ ಸದಾನಂದ ಭಟ್ಟ ನಡಗೋಡು ಸ್ವಾಗತಿಸಿ, ವಂದಿಸಿದರು.