ಶಿರಸಿ: ಭಾರತೀಯ ಜನತಾ ಪಕ್ಷವು ರಾಷ್ಟ್ರ ಮೊದಲು ಎಂಬ ಸಿದ್ದಾಂತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸೇರಿದಂತೆ ಇನ್ನಿತರ ಸರಕಾರ ಸಾಧಿಸಲು ಸಾಧ್ಯವಾಗದ್ದನ್ನು ಪ್ರಧಾನಿ ಮೋದಿ ಸರಕಾರ ಮಾಡಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಅವರು ನಗರದ ಅಂಬೇಡ್ಕರ ಭವನದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಪಡೆದು 75 ವರ್ಷದ ಅಮೃತ ಮಹೋತ್ಸವದ ಆಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ಅಂತ್ಯೋದಯ ಹಿನ್ನಲೆಯಲ್ಲಿ ಫಲಾನುಭವಿಗಳನ್ನು ನೇರವಾಗಿ ತಲುಪುವ ಕೆಲಸವನ್ನು ಕೇಂದ್ರ ಸರಕಾರದ ಆಡಳಿತ ಮಾಡಿದೆ. ಪ್ರಧಾನಿ ಮೋದಿ ಮಾತಿನಂತೆ, ಇದು ಭಾರತೀಯರಿಗೆ ಬದಲಾವಣೆಯ ಸಮಯವಾಗಿದೆ. ಎದುರಿನ ಅವಕಾಶವನ್ನು ನಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಚಿವ ಹೆಬ್ಬಾರ್ ಮಾತನಾಡಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜಿಲ್ಲೆಗೆ ಭೇಟಿ ನೀಡಿರುವುದು ನಿಜಕ್ಕೂ ಅಭಿಮಾನದ ವಿಷಯ. ಜಿಲ್ಲೆಯ ಸಮಸ್ಯೆ, ಆಗಬೇಕಾಗಿರುವ ಕೆಲಸದ ಬಗ್ಗೆ ಈಗಾಗಲೇ ಸಚಿವರ ಗಮನ ಸೆಳೆಯಲಾಗಿದೆ. ಈಗಾಗಲೇ ಜಿಲ್ಲೆಯಿಂದ ನಿಯೋಗವೊಂದನ್ನು ರಚಿಸಲಾಗಿದ್ದು, ಸದ್ಯದಲ್ಲಿಯೇ ದೆಹಲಿಗೆ ನಿಯೋಗದೊಂದಿಗೆ ತೆರಳುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಧ್ಯಕ್ಷೀಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶಾಸಕ ದಿನಕರ ಶೆಟ್ಟಿ, ಎಂಎಲ್ಸಿ ಶಾಂತಾರಾಮ ಸಿದ್ದಿ, ಮಾಜಿ ಶಾಸಕ ಸುನೀಲ್ ಹೆಗಡೆ, ವಿ ಎಸ್ ಪಾಟೀಲ್, ಎನ್ ಎಸ್ ಹೆಗಡೆ ಕರ್ಕಿ, ಪ್ರಮೋದ ಹೆಗಡೆ, ವಿವೇಕಾನಂದ ವೈದ್ಯ, ಕೆ ಜಿ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.
RSS ಕಾರ್ಯಕರ್ತ ಮಹೇಶ ಹಂಚಿನಕೇರಿ ಸುಶ್ರಾವ್ಯವಾಗಿ ವಂದೇ ಮಾತರಮ್ ಹಾಡಿದರು. ಭಾಜಪಾ ಜಿಲ್ಲಾ ಕಾರ್ಯದರ್ಶಿ ಚಂದ್ರು ಎಸಳೆ ವಂದಿಸಿದರು.