ಶಿರಸಿ: ನಮಗೆ ದೇಶ ಮೂಲಭೂತ ಹಕ್ಕಾಗಿ ವಾಖ್ ಸ್ವಾತಂತ್ರ್ಯ ನೀಡಿದೆ, ಅಂತೆಯೇ ನಾವು ದೇಶದ ತೆರನಾಗಿ ನಮ್ಮದೆ ಆದ ಕರ್ತವ್ಯಗಳನ್ನು ಹೊಂದಿದ್ದೆವೆ. ದೇಶದ ಯುವ ಜನತೆ ಸತ್ಯ,ನಿಷ್ಠೆ, ಶಿಸ್ತು, ತ್ಯಾಗ, ಔದಾರ್ಯ ವನ್ನು ಮೈಗೂಡಿಸಿಕೊಳ್ಳಿ ಎಂದು ಕಾಲೇಜು ಪ್ರಾಚಾರ್ಯೆ ಡಾ.ಕೋಮಲಾ ಭಟ್ ಹೇಳಿದರು.
ನಗರದ ಎಂಇಎಸ್ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ನಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಸಮರದ ಸಾವಿರದ ಕತೆಗಳು ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಿಸರ ಬರಹಗಾರ ಶಿವಾನಂದ ಕಳವೆ ಮುಖ್ಯ ಪ್ರವಾಚಕರಾಗಿ ಆಗಮಿಸಿದ್ದರು.
ಅವರು ಮಾತನಾಡಿ ಸೋದೆ, ಕೆಳದಿ, ಬಿಳದಿ, ಗೇರಸೊಪ್ಪ ಈ ಎಲ್ಲಾ ರಾಜಾಡಳಿತ ಪ್ರದೇಶದಲ್ಲಿ ಕಾಳು ಮೆಣಸು ಆದಯದ ಮುಖ್ಯ ಮೂಲವಾಗಿತ್ತು. ಕಾಳು ಮೆಣಸು ಬ್ರಿಟಿಷರು ಭಾರತಕ್ಕೆ ಬರಲು ಕಾರಣವಾಯಿತು. ಕಾಳು ಮೆಣಸಿನ ಪ್ರಮುಖ ವ್ಯಾಪಾರಿಗಳಾದ ಡಚ್ಚರು ಮತ್ತು ಫ್ರೆಂಚರು ಬೆಲೆ ಏರಿಸಿದ್ದರು ಇದರಿಂದ ಇಂಗ್ಲೆಂಡ್ ನ ವರ್ತಕರು ಸಂಕಷ್ಟಕ್ಕೆ ಸಿಲುಕಿದರು. 1599 ರಲ್ಲಿ ಇಂಗ್ಲೆಂಡ್ ನ ಸುಮಾರು 125 ಪ್ರಮುಖ ಕಾಳು ಮೆಣಸು ವ್ಯಾಪಾರಿಗಳು ಲಂಡನ್ ನಲ್ಲಿ ಸಭೆ ಸೇರಿ 75 ಸಾವಿರ ಪೌಂಡಗಳ ಹೂಡಿಕೆಯೊಂದಿಗೆ ಈಷ್ಟ್ ಇಂಡಿಯಾ ಕಂಪನಿ ಪ್ರಾರಂಭಿಸಿ 1600 ರಲ್ಲಿ ಭಾರತದ ಸೂರತ್ ಗೆ ಬಂದು ನೆಲೆಸಿದರು.
ಯಾವುದೇ ಸಂವಹನ ಮಾಧ್ಯಮ ಇಲ್ಲದ, ಮೂಲಭೂತ ಸೌಕರ್ಯ, ಶಿಕ್ಷಣ ಇಲ್ಲದ ಕಾಲದಲ್ಲಿ ದೇಶದ ಮೂಲೆ ಮೂಲೆಗೆ ಹೋರಾಟದ ಸುದ್ದಿ ತಲುಪಿಸುತಿದ್ದುದೇ ದೊಡ್ಡ ಸಾಹಸ. ಈ ಕೆಲಸವನ್ನು ಅಂದಿನ ಭೂಗತ ಪತ್ರಿಕೆಗಳು, ಕರಪತ್ತಗಳು ಮಾಡಿದವು. ಜನರನ್ನು ಕ್ರೋಢೀಕರಿಸಿ ಸ್ವಾತಂತ್ರ್ಯ ಸಮರಕ್ಕೆ ಧುಮುಕಿಸಲು ಪ್ರಮುಖ ಕೊಂಡಿಯಾಗಿ ಕಾರ್ಯ ಮಾಡಿದರು ಎಂದರು.
ಮಹಾದೇವಿ ತಾಯಿ, ತ್ಯಾಗಲಿಯ ಭುವನೇಶ್ವರಿ ತಾಯಿ ಯವರಂತ ಎಷ್ಟೋ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಕರನಿರಾಕರಣೆ ಚಳುವಳಿ ಶಿರಸಿ ಸಿದ್ಧಾಪುರ ಭಾಗದಲ್ಲಿ ಎಷ್ಟು ಪ್ರಖರವಾಗಿತ್ತೆಂದರೆ ಅನೇಕ ರಾಷ್ಟ್ರ ನಾಯಕರು ಶಿರಸಿಗೆ ಭೇಟಿ ನೀಡಲು ಕಾರಣವಾಯಿತು.
ಸದಾ ಎಚ್ಚರವಾಗಿರುವದೆ ನಾವು ಸ್ವಾತಂತ್ರ್ಯಕ್ಕೆ ನೀಡುವ ಬೆಲೆ. ಹೋರಾಟದ ಹಾದಿಯನ್ನು ನೆನಪಿಸುವ ಕೆಲಸವಾಗಲಿ. ಹಿಂದಿನ ಇತಿಹಾಸವನ್ನು ನೊಡುತ್ತ ಮುಂದಿನ ಭವಿಷ್ಯ ನಿರ್ಮಾಣವಾಗಲಿ ಎಂದು ಹೇಳುತ್ತ ಸ್ವಾತಂತ್ರ್ಯ ಸಮರದ ಅನೇಕ ಕವನಗಳನ್ನು ತೆರೆದಿಟ್ಟರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ದೃಶ್ಯನ್ಯಾಸದ ಮೂಲಕ ಭಾಗವಹಿಸಿದ್ದರು