ಯಲ್ಲಾಪುರ: ಭಾರತವನ್ನು ಇನ್ನಷ್ಟು ಸಶಕ್ತಗೊಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗಿದೆ. ದೇಶದ ಇತಿಹಾಸದ ಕುರಿತು ಶಾಲೆಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಅಭಿವೃದ್ದಿ ಸಮೀತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಅನೇಕ ಹೋರಾಟಗಳು ನಡೆದಿದೆ. ಭಾರತದ ಇತಿಹಾಸದ ಬಗ್ಗೆ ಪ್ರತಿಯೊಬ್ಬ ಮಕ್ಕಳಿಗೂ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು. ದೇಶ ಇನ್ನಷ್ಟು ಸ್ವಾವಲಂಬಿ ಹಾಗೂ ಸಶಕ್ತವಾಗಲು ಮಕ್ಕಳ ಪಾತ್ರ ದೊಡ್ಡದು. ರಾಷ್ಟ್ರ ರಕ್ಷಣೆಗಾಗಿ ಪ್ರತಿಯೊಬ್ಬರು ದೀಕ್ಷೆ ಪಡೆಯುವ ನಿಟ್ಟಿನಲ್ಲಿ ದೇಶದ ಬಗ್ಗೆ ಗೌರವ ಮೂಡುವ ವಿಷಯಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದು ಕರೆ ನೀಡಿದರು. ಮಕ್ಕಳ ಮನಸ್ಸಿನಲ್ಲಿ ಸದಾ ದೇಶದ ಇತಿಹಾಸ ಅಚ್ಚುಳಿದಿರಬೇಕು. ವೀರ ಸೇನಾನಿಗಳನ್ನು ಅವರು ನೆನಪಿಸುವಂತಾಗಬೇಕು. ಆಗ ಮಾತ್ರ ಅವರು ಭವ್ಯ ಭಾರತಕ್ಕೆ ಕೊಡಿಗೆ ನೀಡಬಲ್ಲರು ಎಂದು ಪ್ರತಿಪಾದಿಸಿದರು.
75 ವರ್ಷಗಳ ನಂತರ ಕಾಶ್ಮಿರದಲ್ಲಿ ಎಲ್ಲಾ ಪಂಚಾಯತದ ಮೇಲೆ ಭಾರತ ಧ್ವಜ ಹಾರಾಡುತ್ತಿದೆ. ಇದೀಗ ಪೂರ್ಣ ಭಾರತಕ್ಕೆ ಸ್ವಾತಂತ್ರ್ಯ ದೊರೆತಂತಾಗಿದೆ. ಅನೇಕ ಸವಾಲುಗಳ ನಡುವೆ ಭಾರತದ ರಕ್ಷಣೆಗಾಗಿ ದುಡಿಯುತ್ತಿರುವ ಸೈನಿಕರ ಸೇವೆ ಸ್ಮರಣೀಯ. ದೇಶಕ್ಕಾಗಿ ತ್ಯಾಗ ಮಾಡುವ ಮನಸ್ಸು ಪ್ರಜೆಗಳಿಗೆ ಬಂದಲ್ಲಿ ಜನರೇ ರಾಷ್ಟ್ರ ರಕ್ಷಣೆ ಮಾಡಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಸಂಸ್ಥೆಯ ಯೋಜನೆಗಳ ಕುರಿತು ವಿವರಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಇತರರು ಇದ್ದರು. ಗಣೇಶ ಭಟ್ಟ ನಿರ್ವಹಿಸಿದರು. ಡಿ.ಕೆ ಗಾಂವ್ಕರ್ ವರದಿ ವಾಚಿಸಿದರು. ಎಸ್ ಎಲ್ ಭಟ್ಟ ಸ್ವಾಗತಿಸಿದರು. ಮುಕ್ತಾ ಶಂಕರ್ ವಂದಿಸಿದರು.