ಶಿರಸಿ: ಪಠ್ಯ ಪುಸ್ತಕದ ಜೊತೆಗೆ ಉಳಿದ ಸಾಮಾನ್ಯ ಹಾಗೂ ಉಲ್ಲೇಖ ಗ್ರಂಥ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಓದುವುದರಿಂದ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುತ್ತದೆ ಎಂದು ಡಾ.ಎ.ವಿ ಬಾಳಿಗಾ ಕಾಲೇಜಿನ ಮುಖ್ಯಗ್ರಂಥಪಾಲಕ ಶಿವಾನಂದ ಬುಳ್ಳಾ ಹೇಳಿದರು.
ಅವರು ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗದ ವತಿಯಿಂದ ರಾಷ್ಟ್ರೀಯ ಗ್ರಂಥಪಾಲಕ ದಿನಾಚರಣೆಯ ಅಂಗವಾಗಿ ಪದ್ಮಶ್ರೀ ಡಾ. ಎಸ್.ಅರ್. ರಂಗನಾಥ ಸ್ಮರಣಾರ್ಥ ಆಯೋಜಿಸಿದ್ದ ‘ವೆಬಿನಾರ್’ನಲ್ಲಿ ಮಾತನಾಡುತ್ತಿದ್ದರು.
ಡಿಜಿಟಲ್ ಲೈಬ್ರರಿ ಮೂಲಕ ಸಿಗುವಂತಹ ವಿಶ್ವಕೋಶಗಳು, ಎಜ್ಯುಕೇಶನ್ ಬ್ಲಾಗ್, ಇ-ಜರ್ನಲ್ಸ್ ಈ ಎಲ್ಲಾ ಸೌಲಭ್ಯಗಳ ಬಗ್ಗೆ ಆನ್ಲೈನ್ ಡಿಜಿಟಲ್ ಗ್ರಂಥಾಲಯ ಆಳವಾಗಿ ತಿಳಿಸಿಕೊಡುತ್ತದೆ. ಈಗಿನ ವಿದ್ಯಾರ್ಥಿಗಳು ಸೊಶಿಯಲ್ ಮೀಡಿಯಾದಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಿದ್ದು ಸ್ವಲ್ಪ ಸಮಯವನ್ನು ಡಿಜಿಟಲ್ ಲೈಬ್ರರಿಯ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಲು ಬಳಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಇಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ ನಮ್ಮ ಸಂಸ್ಥೆಯ ಗ್ರಂಥಾಲಯದಲ್ಲಿ ಸುಮಾರು 80,000 ದಷ್ಟು ಪುಸ್ತಕಗಳಿವೆ. ಅಲ್ಲದೇ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಲವು ವ್ಯವಸ್ಥೆಗಳನ್ನು ಗ್ರಂಥಾಲಯದ ಮೂಲಕ ಕಲ್ಪಿಸಲಾಗಿದೆ. ಈ ವೆಬಿನಾರ್ ನ ಉಪಯೋಗವನ್ನು ವಿದ್ಯಾರ್ಥಿಗಳು ತೆದುಕೊಂಡು ಆ ಮೂಲಕ ಡಿಜಿಟಲ್ ಲೈಬ್ರರಿಯ ಉಪಯೋಗವನ್ನು ತೆಗೆದುಕೊಳ್ಳುವಂತೆ ಆಶಿಸಿದರು.
ಪ್ರಾಸ್ತಾವಿಕ ಮಾತನಾಡಿದ ಪ್ರಾಂಶುಪಾಲೆ ಡಾ. ಕೋಮಲಾ ಭಟ್ ವಿದ್ಯಾರ್ಥಿಗಳು ಗ್ರಂಥಾಲಯದ ಮೂಲಕ ಹೆಚ್ಚು ಓದುವ ಹವ್ಯಾಸವನ್ನುರೂಢಿಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.
ವೆಬಿನಾರ್ ನಲ್ಲಿ ಗ್ರಂಥಪಾಲಕಿ ಶಾರದಾ ಭಟ್ ಹಾಗೂ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.