ಯಲ್ಲಾಪುರ: ಸ್ನೇಹ ಸಾಗರ ವಸತಿ ಶಾಲೆಯ ಸುತ್ತ-ಮುತ್ತಲು ಸುಮಾರು ಗಿಡಗಳನ್ನು ಶಾಲಾ ಮಕ್ಕಳು ಹಾಗೂ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗದವರು ನೆಟ್ಟು ವನಮಹೋತ್ಸವವನ್ನು ಆಚರಿಸಿದರು.
ಸಭಾಕಾರ್ಯಕ್ಕೆ ಅತಿಥಿಗಳಾಗಿ ಬಂದ ಯಲ್ಲಾಪುರದ ಇಡಗುಂದಿ ವಲಯ ಅರಣ್ಯ ರಕ್ಷಣಾಧಿಕಾರಿ ಪ್ರಸಾದ್ ಟಿ. ಪಡ್ನೇಕರ್, ಶಾಲಾ ಅಧ್ಯಕ್ಷರಾದ ಎಸ್. ಎಲ್ ಭಟ್, ಶಾಲಾ ಕಾರ್ಯಕಾರಿ ನಿರ್ದೇಶಕಿ ವೀಣಾ ಭಟ್, ಪ್ರಾಂಶುಪಾಲರಾದ ವಾಸು ಎಸ್. ದತ್ತ ಉಪಪ್ರಾಂಶುಪಾಲ ಮಂಜುನಾಥ ವಿ. ಜಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗುರುದತ್ತ ಎಮ್. ಎಸ್. ಹಿರಿಯ ಶಿಕ್ಷಕರಾದ ಎನ್. ಎ ಭಟ್ಟ ಅವರು ಸೇರಿ ಗಿಡಕ್ಕೆ ನೀರುಣಿಸುವ ಮುಖೇನ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ವಲಯ ಸಂರಕ್ಷಣಾಧಿಕಾರಿ ಪಡ್ನೇಕರ್ ಮಾತನಾಡುತ್ತಾ ಅವರು ಮಳೆಯ ಅಭಾವ, ವನ್ಯಜೀವಿಗಳ ರಕ್ಷಣೆಗಾಗಿ ಹಸಿರಿನ ಉಳಿವು ಅತ್ಯಗತ್ಯವಿದೆ. ಆದರೆ ಈ ವರ್ಷದ ನೀರಿನ ಪ್ರವಾಹದ ಕಾರಣ ಕಳಚೆ, ಮಲವಳ್ಳಿ, ಕೊಡ್ಲಗದ್ದೆ ಮುಂತಾದ ಊರುಗಳಲ್ಲಿ ಗುಡ್ಡ ಕುಸಿತದ ಪರಿಣಾಮ ಬಹಳ ಮಟ್ಟದ ಅರಣ್ಯನಾಶ, ಊರಿನ ನಾಗರಿಕರ ಕಷ್ಟಗಳನ್ನು ನೋಡಲು ಸಾಧ್ಯವಿಲ್ಲ. ಗಿಡಮರಗಳು ಭೂಮಿಯ ಗಟ್ಟಿತನವನ್ನು ಕಾಯ್ದುಕೊಳ್ಳುತ್ತವೆ. ಹಾಗಾಗಿ ಸಕಾಲದಲ್ಲಿ ಮಳೆ-ಬೆಳೆ ಆಗುವುದರ ಜೊತೆಗೆ ನೀರಿನ ಅವಶ್ಯತೆಯ ಪೂರೈಕೆ ಆಗಲು ಹಸಿರಿನ ಸಮೃದ್ಧಿಯನ್ನು ರಕ್ಷಿಸಬೇಕು. ಪರಿಸರ ಕಾಳಜಿ ಇರುವ ಜನರ ಸಹಾಯದಿಂದ ಉತ್ತಮ ಫಲ ನೀಡುವ ಗಿಡಗಳನ್ನು ಬೆಳಸಲು ಸಾಧ್ಯ. ಅಭಿವೃದ್ಧಿಯ ಜೊತೆಗೆ ಪರಿಸರದ ಸಂರಕ್ಷಣೆಯೂ ಸಮಾನವಾಗಿ ನಡೆಸಿಕೊಂಡು ಹೋಗಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಶಾಲೆಯಲ್ಲಿ ಪ್ರತಿವರ್ಷ ಹೊಸ ಹೊಸ ತಳಿಗಳನ್ನು ನೆಟ್ಟು ಕಾಳಜಿಯಿಂದ ಬೆಳೆಸುತ್ತಾ ಬಂದಿದ್ದು ಇಂದಿನ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸಿ ನೆಲ-ಜಲದ ಜೊತೆಗೆ ಹಸಿರು ಉಸಿರಾಗಿಸುವುದು ನಮ್ಮೆಲ್ಲರ ಜವಾಬ್ಧಾರಿ ಆಗಿದೆ ಎಂದು ಎಸ್. ಎಲ್ ಭಟ್ ಅವರು ತಿಳಿಸಿದರು. ಪ್ರಾಂಶುಪಾಲರು ಮಾತನಾಡಿ ಸಸಿ ನೆಡುವುದು ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಸಾಗಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯ ಕಾರ್ಯ ಸಿಬ್ಬಂದಿ ವರ್ಗದವರಿಗೆ ಕಿರು ಕಾಣಿಕೆಯನ್ನು ಶಾಲಾವತಿಯಿಂದ ನೀಡಿ ಗೌರವಿಸಲಾಯಿತು. ಯಶೋಧಾ ಭಟ್ಟ ಅವರು ಸಭಾಕಲಾಪದ ನಿರೂಪಿಸಿದರು. ವೈಶಾಲಿ ಅವರು ಸ್ವಾಗತಿಸಿದರು. ಶ್ರೀಪಾದ ಭಟ್ಟ ವಂದಿಸಿದರು.