ಯಲ್ಲಾಪುರ: ತಾಲೂಕಿನ ಮಳಲಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆಯ ಪ್ರಯುಕ್ತ 75 ಗಿಡಗಳನ್ನು ನೆಡುವ ಸಂಕಲ್ಪದೊಂದಿಗೆ ವೃಕ್ಷಾರೋಪಣ ಕಾರ್ಯಕ್ರಮ ಸೋಮವಾರ ನಡೆಯಿತು.
ವೃಕ್ಷಾರೋಪಣ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ ಪ್ರಕೃತಿಯ ಸುಸ್ಥಿರತೆಯನ್ನು ಮಾನವನ ದಬ್ಬಾಳಿಕೆಯಿಂದ ಅಸ್ಥಿರಗೊಳಿಸಿದರೆ ಪ್ರಕೃತಿ ವಿಕೋಪಗಳು ಉಂಟಾಗುತ್ತವೆ. ಪ್ರಕೃತಿ ಮಾನವನ ಜೀವ, ಜೀವನದ ಭಾಗವಾಗಬೇಕು. ಗಿಡ, ಮರಗಳ ಸಂರಕ್ಷಣೆ ಮೂಲಕ ನಮ್ಮ ಬದುಕು ಹಾಗೂ ಮುಂದಿನ ಪೀಳಿಗೆಯ ಬದುಕು ಭದ್ರಗೊಳಿಸಬೇಕು ಎಂದರು.
ವನಮಹೋತ್ಸವದ ಶೀರ್ಷಿಕೆಯನ್ನು ಬಿ.ಆರ್.ಸಿ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ ಅನಾವರಣಗೊಳಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಭಾಗ್ವತ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಸದಸ್ಯರಾದ ಆರ್.ಎಸ್.ಭಟ್ಟ, ಅಶೋಕ ಮರಾಠಿ, ಸಾಮಾಜಿಕ ಅರಣ್ಯ ವಿಭಾಗದ ಆರ್.ಎಫ್.ಒ ದಾನಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಭಾರತ ಸೇವಾದಳದ ತಾಲೂಕು ಸಂಘಟಕ ಸಂಜೀವಕುಮಾರ ಹೊಸ್ಕೇರಿ, ಶಿಕ್ಷಣ ಇಲಾಖೆಯ ದಿಲೀಪ ದೊಡ್ಡಮನಿ, ಎಂ.ಎ.ಬಾಗೇವಾಡಿ, ಉಷಾ ನಾಯಕ, ಷಣ್ಮುಖ ಹೆಗಡೆ, ಪ್ರಶಾಂತ.ಜಿ.ಎನ್., ಸಂತೋಷಕುಮಾರ ಜಿಗಳೂರ, ಮುಖ್ಯಾಧ್ಯಾಪಕಿ ಸುಜಾತಾ ನಾಯ್ಕ ಇತರರಿದ್ದರು.
ಮಹತಿ ಭಾಗ್ವತ ಪ್ರಾರ್ಥಿಸಿದರು. ಸಿ.ಆರ್.ಪಿ ನಾಗಪ್ಪ ನಾಗನೂರ ಸ್ವಾಗತಿಸಿದರು. ಶಿಕ್ಷಕರಾದ ರಾಘವೇಂದ್ರ ಪಟಗಾರ ನಿರ್ವಹಿಸಿದರು. ಲತಾ ತಳೆಕರ್ ವಂದಿಸಿದರು. ಶಾಲೆಯ ಆವಾರದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿಗೆ 75 ಗಿಡಗಳನ್ನು ನೆಡಲಾಯಿತು